ಉದಯವಾಹಿನಿ, ಬೆಂಗಳೂರು: ಹೊರಗೆ ತೆಗೆದುಕೊಂಡ ಹೋಗಿದ್ದ ದ್ವಿಚಕ್ರ ವಾಹನವನ್ನು ವಾಪಸ್‌‍ ತರದಿದ್ದಕ್ಕೆ ತಂದೆ-ಮಗನ ಮಧ್ಯೆ ಜಗಳ ನಡೆದು ಮಗನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಡಿ ಗ್ರೂಪ್‌ ಲೇಔಟ್‌ನ ಮುದ್ದಿನಪಾಳ್ಯ ನಿವಾಸಿ ಅಂಜನ್‌ಕುಮಾರ್‌ (27) ತಂದೆಯಿಂದಲೇ ಕೊಲೆಯಾದ ಮಗ. ಈತ ಪಿಯುಸಿ ವ್ಯಾಸಂಗ ಮಾಡಿದ್ದು, ಅರ್ಧಕ್ಕೇ ವಿದ್ಯಾಭ್ಯಾಸ ಮೊಟಕುಗೊಳಿಸಿ ಮನೆಯಲ್ಲೇ ಇರುತ್ತಿದ್ದನು.ರಿಯಲ್‌ ಎಸ್ಟೇಟ್‌ ಉದ್ಯಮಿ ವೆಂಕಟೇಶ್‌ ಅವರ ಮಗಳು ಉದ್ಯೋಗದಲ್ಲಿದ್ದು, ಕಚೇರಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು.
ನಿನ್ನೆ ಸಂಜೆ ಸ್ನೇಹಿತರನ್ನು ನೋಡಲು ವೆಂಕಟೇಶ್‌ ಅವರು ಮಗಳ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದಾಗ ಕೀ ಕಳೆದು ಹೋಗಿದೆ. ಹಾಗಾಗಿ ದ್ವಿಚಕ್ರ ವಾಹನವನ್ನು ಅಲ್ಲಿಯೇ ಬಿಟ್ಟು ಮನೆಗೆ ಹಿಂದಿರುಗಿದ್ದಾರೆ.  ತಂಗಿಯ ದ್ವಿಚಕ್ರ ವಾಹನ ಇಲ್ಲದಿರುವುದನ್ನು ಗಮನಿಸಿ ಅಂಜನ್‌ಕುಮಾರ್‌ ತಂದೆಯನ್ನು ಪ್ರಶ್ನಿಸಿದ್ದಾನೆ. ಕೀ ಕಳೆದಿದ್ದರಿಂದ ಅಲ್ಲೇ ಬಿಟ್ಟಿದ್ದೇನೆಂದು ಹೇಳಿದಾಗ ಕೋಪಗೊಂಡ ಅಂಜನ್‌ಕುಮಾರ್‌ ತಂದೆ ಜತೆ ಜಗಳವಾಡಿ ಹೆಲೆಟ್‌ನಿಂದ ಹೊಡೆದಿದ್ದಾನೆ. ಮಗ ತನ್ನ ಮೇಲೆಯೇ ಕೈ ಮಾಡಿದನೆಂದು ಕೋಪಗೊಂಡ ತಂದೆ ಅಡುಗೆ ಮನೆಯಿಂದ ಚಾಕು ತಂದು ಮಗನ ಎದೆಗೆ ಚುಚ್ಚಿದಾಗ ತೀವ್ರ ರಕ್ತಸ್ರಾವವಾಗಿದೆ.ತಕ್ಷಣ ಮಗನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!