ಉದಯವಾಹಿನಿ, ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಎಸ್ಪಿಪಿಯನ್ನು ಬದಲಾವಣೆ ಮಾಡುವ ಪ್ರಸ್ತಾಪವಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಎಸ್ಪಿಪಿಯನ್ನು ಬದಲಾವಣೆ ಮಾಡಬೇಕಾದರೆ ಕಾನೂನು ಪ್ರಕಾರವೇ ಮಾಡಲಾಗುತ್ತದೆ. ಅದರಲ್ಲಿ ತಪ್ಪೇನಿಲ್ಲ. ಯಾರೇ ಎಸ್ಎಸ್ಪಿಯಾದರೂ ಕಾನೂನು ಪ್ರಕಾರವಾಗಿ ನಡೆದುಕೊಳ್ಳಬೇಕು ಎಂದರು.
ಬದಲಾವಣೆ ಮಾಡಬೇಕಾದರೆ ಅದಕ್ಕೇನಾದರೂ ಕಾರಣ ಇರುತ್ತದೆ. ನಮಗೂ ಜವಾಬ್ದಾರಿ ಇದೆ. ಕಾನೂನು ಸಲಹೆ ಪಡೆದೇ ತೀರ್ಮಾನ ಕೈಗೊಳ್ಳಲಾಗುವುದು, ಈ ಕೊಲೆ ಕೇಸ್ ಸಡಿಲ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಯಾರ ಪ್ರಭಾವಕ್ಕೊಳಗಾಗದೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ನಟ ದರ್ಶನ್ ಅವರ ಫಾರ್ಮ್ ಹೌಸ್ ಮ್ಯಾನೇಜರ್ ನಾಪತ್ತೆಯಾಗಿರುವ ವಿಚಾರ ಗೊತ್ತಿಲ್ಲ. ಹೊಸದಾಗಿ ಈ ವಿಚಾರ ಪ್ರಸ್ತಾಪವಾಗಿದೆ ಇದರ ಬಗ್ಗೆಯೂ ತನಿಖೆ ಮಾಡಲು ಅಧಿಕಾರಿಗಳು ಅನುಮತಿ ಕೋರಿದರೆ ಸಮತಿಸಲಿದೆ.ಮತ್ತೊಬ್ಬ ಮ್ಯಾನೇಜರ್ ಆತಹತ್ಯೆ ಮಾಡಿಕೊಂಡಿರುವ ವಿಚಾರಕ್ಕೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಸಂಬಂಧ ಇದೆಯೇ ಎಂಬುದರ ಬಗ್ಗೆ ವಿಚಾರಣೆ ಮಾಡುತ್ತಾರೆ.
