ಉದಯವಾಹಿನಿ, ಮುಂಡರಗಿ: ಹೊಟ್ಟೆಪಾಡಿಗೆ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಪಟ್ಟಣದ ದೇವು ಹಡಪದ ಎಂಬ ಯುವಕನು ಅಸಹಾಯಕರಿಗೆ ಮತ್ತು ಅಗತ್ಯವಿರುವವರಿಗೆ ಸದಾ ಉಚಿತ ರಕ್ತದಾನ ಮಾಡುವ ಮೂಲಕ ಇತರರ ಬದುಕಿಗೆ ಬೆಳಕು ನೀಡುತ್ತಿದ್ದಾರೆ.
ರಕ್ತದಾನಿ ದೇವು ಹಡಪದ ಅವರು ಕಳೆದ 15 ವರ್ಷಗಳಿಂದ ಅಗತ್ಯವಿರುವವರಿಗೆ 36 ಬಾರಿ ಉಚಿತವಾಗಿ ರಕ್ತದಾನ ಮಾಡಿದ್ದಾರೆ.
ಕೆಲವು ತುರ್ತು ಸಂದರ್ಭಗಳಲ್ಲಿ ತಮ್ಮ ಪತ್ನಿ ಶಾರದಾ ಹಾಗೂ ಕುಟುಂಬದವರೆಲ್ಲ ಏಕಕಾಲದಲ್ಲಿ ರಕ್ತದಾನ ಮಾಡಿ ಅನ್ಯರ ಜೀವಗಳನ್ನು ಉಳಿಸಿದ್ದಾರೆ. ತಾನು, ತಮ್ಮನ ಪತ್ನಿ, ಸಹೋದರರು ಹಾಗೂ ತನ್ನ ಪರಿವಾರದವರೆಲ್ಲ ಅಗತ್ಯವಿರುವವರಿಗೆ ನಿರಂತರವಾಗಿ ರಕ್ತದಾನ ಮಾಡುತ್ತಿದ್ದಾರೆ.
ಮೂಲತಃ ತಾಲ್ಲೂಕಿನ ತಿಪ್ಪಾಪೂರ ಗ್ರಾಮದವರಾದ ದೇವು ಹಡಪದ ಅವರು ತಮ್ಮ ಕುಲಕಸುಬನ್ನು ಅರಸಿಕೊಂಡು 15 ವರ್ಷಗಳ ಹಿಂದೆ ಮುಂಡರಗಿ ಪಟ್ಟಣಕ್ಕೆ ಆಗಮಿಸಿದರು. ಪಟ್ಟಣದಲ್ಲಿ ಶಿವು ಮೆನ್ಸ್ ಪಾರ್ಲರ್ ತೆರೆದು ಉದ್ಯೋಗ ಆರಂಭಿಸಿದರು. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಮೂಲಕ ಗ್ರಾಹಕರ ಮನಗೆದ್ದ ದೇವು ಅವರ ಗ್ರಾಹಕರ ಸಂಖ್ಯೆ ಹೆಚ್ಚಾಗತೊಡಗಿತು. ಆನಂತರ ಪಟ್ಟಣದ ಇನ್ನೊಂದು ಭಾಗದಲ್ಲಿ ಅವರು ಮತ್ತೊಂದು ಮಳಿಗೆಯನ್ನು ತೆರೆದಿದ್ದಾರೆ.
ಹಳೆಯ ಕ್ಷೌರಿಕ ಪದ್ಧತಿಗಳನ್ನು ಕೈಬಿಟ್ಟು ಆಧುನಿಕ ಪದ್ಧತಿಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಂಡರು. ಕ್ಷೌರಿಕ ವೃತ್ತಿಗೆ ಸಂಬಂಧಿಸಿದ ಹಲವಾರು ನೂತನ ಸಲಕರಣೆ ಹಾಗೂ ಸೇವೆಯನ್ನು ಗ್ರಾಹಕರಿಗೆ ನೀಡತೊಡಗಿದರು. ಯುವಕರಿಗೆ ಕ್ಷೌರಿಕ ವೃತ್ತಿಯನ್ನು ಕಲಿಸಿ ಅವರಿಗೆ ತಮ್ಮ ಅಂಗಡಿಯಲ್ಲಿಯೇ ಉದ್ಯೋಗ ನೀಡಿದರು.
ದೇವು ಹಡಪದ ಅವರು ತಮ್ಮ ವೃತ್ತಿಯ ಜೊತೆಗೆ ಸಮಾಜ ಸೇವೆಗೂ ಮುಂದಾದರು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಅಂಧ, ಅನಾಥ ಮಕ್ಕಳಿಗೆ ಉಚಿತ ಕ್ಷೌರ ಮಾಡತೊಡಗಿದರು. ಅನಾಥರು, ಅಂಗವಿಕಲರಿಗೆ ಉಚಿತ ಕ್ಷೌರ ಮಾಡತೊಡಗಿದರು. ಹಲವಾರು ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ತೆರಳಿ ಉಚಿತ ಸೇವೆ ನೀಡುತ್ತಲಿದ್ದಾರೆ. ಇದರೊಂದಿಗೆ ಹಲವು ವರ್ಷಗಳಿಂದ ಉಚಿತ ರಕ್ತದಾನ ಕಾಯಕವನ್ನು ನಿರಂತರವಾಗಿ ಮಾಡುತ್ತಲಿದ್ದಾರೆ.
ಹಲವು ವರ್ಷಗಳ ಹಿಂದೆ ಶಿವು ವಾಲಿಕಾರ, ಸುಭಾಷ ಗುಡಿಮನಿ, ನಾಗರಾಜ ಗುಡಿಮನಿ, ವಿನಾಯಕ ಕರಿಭಿಷ್ಟ, ವೀರೇಶ ಹಡಪದ, ರಾಜಾಬಕ್ಷಿ, ಜಲಾಲ ಮೊದಲಾದ ಸಹಮನಸ್ಕರ ಒಂದು ರಕ್ತದಾನಿಗಳ ತಂಡವನ್ನು ಕಟ್ಟಿಕೊಂಡು ನಿರಂತರವಾಗಿ ಉಚಿತ ರಕ್ತದಾನ ಮಾಡುತ್ತಲಿದ್ದಾರೆ.
