ಉದಯವಾಹಿನಿ, ಬೆಂಗಳೂರು: ಕಾವೇರಿ ನದಿಪಾತ್ರದಿಂದ ತಮಿಳುನಾಡಿಗೆ ಪ್ರತಿದಿನ ಒಂದು ಟಿಎಂಸಿ ನೀರು ಹರಿಸುವಂತೆ ಹೇಳಲಾಗಿರುವ ತೀರ್ಪಿನ ಕುರಿತಂತೆ ಇಂದು ಸಂಜೆ ಸರ್ವಪಕ್ಷಗಳ ಸಭೆ ಕರೆಯಲಾಗಿದ್ದು, ರಾಜ್ಯದ ಹಿತಾಸಕ್ತಿ ತಕ್ಷಣದ ಸಲುವಾಗಿ ಮಹತ್ವದ ಚರ್ಚೆಗಳು ನಡೆಯಲಿವೆ.ಸಭೆಗೆ ಕಾವೇರಿ ನದಿಪಾತ್ರದ ಶಾಸಕರು, ವಿಧಾನಪರಿಷತ್‌ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು, ರಾಜ್ಯದಿಂದ ಕೇಂದ್ರದಲ್ಲಿ ಸಚಿವರಾದವರನ್ನು ಆಹ್ವಾನಿಸಲಾಗಿದೆ.
ಪ್ರತಿದಿನ ಒಂದು ಟಿಎಂಸಿ ನೀರನ್ನು ಹರಿಸಬೇಕು ಎಂದು ಆದೇಶಿಸಿರುವುದು ರಾಜ್ಯ ಸರ್ಕಾರಕ್ಕೆ ಬಿಸಿ ತುಪ್ಪವಾಗಿದ್ದು, ಇದರ ಪಾಲಿಸಿದರೆ ಭವಿಷ್ಯದಲ್ಲಿ ಕೃಷಿ, ಕುಡಿಯುವ ನೀರಿಗೆ ಸಮಸ್ಯೆಎ ಎದುರಾಗಲಿದೆ.
ಹೀಗಾಗಿ ಆದೇಶದ ಪಾಲನೆ ಕಷ್ಟಸಾಧ್ಯ ಎಂಬ ಅಭಿಪ್ರಾಯವನ್ನು ರಾಜ್ಯ ಸರ್ಕಾರ ಹೊಂದಿದೆ. ಈಗಾಗಲೇ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿರುವುದರಿಂದ ಅದರ ಅನುಷ್ಠಾನಕ್ಕೆ ಕಾಲಾವಕಾಶ ನೀಡುವಂತೆ ಮೇಲನವಿ ಸಲ್ಲಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಆದರೆ ಸರ್ವಪಕ್ಷಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮಂಡ್ಯದ ಸಂಸದರಾಗಿರುವ ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಪ್ರಮುಖ ಸಚಿವರಾಗಿದ್ದಾರೆ. ಹೀಗಾಗಿ ಕಾವೇರಿ ನೀರಿನ ವಿವಾದವನ್ನು ಬಗೆಹರಿಸಲು ಅವರ ಸಹಕಾರ ಕೋರಲು ಸರ್ಕಾರ ನಿರ್ಧರಿಸಿದೆ.ರಾಜ್ಯದಲ್ಲಿ ಮಳೆಯಾಗುತ್ತಿದ್ದರೂ ಕೆರೆಕಟ್ಟೆಗಳು ತುಂಬುವಷ್ಟು ನೀರು ಬರುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿನಲ್ಲೂ ಸಾಕಷ್ಟು ಮಳೆಯಾಗಿದ್ದು, ಅಲ್ಲಿನ ಜಲಾಶಯಗಳಲ್ಲಿ ಹೆಚ್ಚುವರಿ ನೀರಿದೆ. ಸುಮಾರು 5.5 ಟಿಎಂಸಿ ನೀರನ್ನು ತಮಿಳುನಾಡು ನದಿಗೆ ಹರಿಯಬಿಟ್ಟಿದೆ ಎಂದು ಸಿಡಬ್ಲ್ಯುಆರ್‌ಸಿ ಮುಂದೆ ಕರ್ನಾಟಕ ವಾದ ಮಂಡಿಸಿತ್ತು. ಅದರ ಹೊರತಾಗಿಯೂ ಜು.31ರವರೆಗೆ ಪ್ರತಿದಿನ 11,500 ಸಾವಿರ ಕ್ಯೂಸೆಕ್‌ ಅಂದರೆ ಒಂದು ಟಿಎಂಸಿ ನೀರನ್ನು ಹರಿಸುವಂತೆ ಸಿಡಬ್ಲ್ಯುಆರ್‌ಸಿ ಆದೇಶ ನೀಡಿದೆ.

Leave a Reply

Your email address will not be published. Required fields are marked *

error: Content is protected !!