ಉದಯವಾಹಿನಿ, ತಾಳಿಕೋಟೆ: ಸ್ಥಳೀಯ ಶ್ರೀ ಖಾಸ್ಗತೇಶ್ವರ ಮಹಾ ಮಠದ ಶ್ರೀ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಜಾತ್ರಾ ಉತ್ಸವ ಅಂಗವಾಗಿ ಇಂದು ಶುಕ್ರವಾರರಂದು ಮಹಾ ರಥೋತ್ಸವವು ಲಕ್ಷಾಂತರ ಭಕ್ತಸಮೂಹದ ಮದ್ಯ ವಿಜೃಂಬಣೆಯಿಂದ ಜರುಗಿತು.
ಜಾತ್ರೋತ್ಸವ ಅಂಗವಾಗಿ ದಿನನಿತ್ಯ ಶ್ರೀ ಖಾಸ್ಗತೇಶ್ವರ ಗದ್ದುಗೆಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮವನ್ನು ಶ್ರೀಮಠದ ವೇ|| ವಿಶ್ವನಾಥ ವಿರಕ್ತಮಠ, ವೇ.ಮಹಾಂತಯ್ಯ ವಿರಕ್ತಮಠ ಅವರು ನಡೆಸಿಕೊಟ್ಟರು.
ಶುಕ್ರವಾರರಂದು ಜಾತ್ರೋತ್ಸವ ಅಂಗವಾಗಿ ಸಾಯಂಕಾಲ 5-30 ಜರುಗಿದ ಶ್ರೀ ಖಾಸ್ಗತೇಶ್ವರ ರಥೋತ್ಸವವು ಶ್ರೀ ಮಠದಿಂದ ಪ್ರಾರಂಬಗೊಂಡು ಶ್ರೀ ಬಸವೇಶ್ವರ ದೇವಸ್ಥಾನದ ವರೆಗೆ ಜರುಗಿ ಮರಳಿ ಶ್ರೀ ಮಠಕ್ಕೆ ತಲುಪಿತು.
ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಜಾತ್ರಾ ಉತ್ಸವದಲ್ಲಿ ಶ್ರೀಮಠದ ಉಸ್ತುವಾರಿ ವೇ. ಮುರುಘೇಶ ವಿರಕ್ತಮಠ, ವೇ|| ವಿಶ್ವನಾಥ ವಿರಕ್ತಮಠ, ಅವರು ನೆತೃತ್ವ ವಹಿಸಿದ್ದರು. ತಾಳಿಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಹಾಗೂ ಮುಂಬೈ, ಪುಣೈ, ಸಾಂಗ್ಲಿ, ಮಿರೇಜ್, ಸೋಲ್ಲಾಪೂರ, ಕೊಲ್ಲಾಪುರ, ಬೆಂಗಳೂರ, ಗೋವಾ ಹಾಗೂ ಹೈದ್ರಾಬಾದದಿಂದ ಲಕ್ಷಾಂತರ ಭಕ್ತರು ಆಗಮಿಸಿ ಈ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.
