ಉದಯವಾಹಿನಿ, ಕೊಳ್ಳೇಗಾಲ: ಕೊಳ್ಳೇಗಾಲ: ನಗರದ ಸುತ್ತಮುತ್ತ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 209ರ ಬೈಪಾಸ್ ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದು, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದಾಗಿ ವಾಹನಗಳ ಸಂಚಾರಕ್ಕೆ ಕಿರಿಕಿರಿ ಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಚಾಮರಾಜನಗರದಿಂದ ಆರಂಭ ವಾದ ಬೈಪಾಸ್ ರಸ್ತೆ ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ, ಹನೂರು ಮಾರ್ಗವಾಗಿ ಹಾದುಹೋಗಿದ್ದು ಹೆದ್ದಾರಿಯ ಕಾಮಗಾರಿ ಪೂರ್ಣ ಗೊಂಡಿಲ್ಲವಾದರೂ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.ಕಾಮಗಾರಿಯೂ ಕಳಪೆಯಿಂದ ಕೂಡಿದೆ ಎಂದು ರೈತ ಮುಖಂಡರು ದೂರಿದ್ದಾರೆ.
ಕೊಳ್ಳೇಗಾಲ, ಅಗರ, ಮಾಂಬಳ್ಳಿ, ಯಳಂದೂರು, ಸಂತೇಮರಹಳ್ಳಿ ಬೈಪಾಸ್ ರಸ್ತೆಗಳ ಕಾಮಗಾರಿ ಪ್ರಗತಿ ಯಲ್ಲಿದ್ದು, ಈ ಮಾರ್ಗದಲ್ಲಿ ಮುಖ್ಯ ಪಟ್ಟಣಗಳು, 3 ಮುಖ್ಯ ಸೇತುವೆ, 12 ಸಣ್ಣ ಸೇತುವೆ, ರೈಲ್ವೆ ಮೇಲ್ಸೇತುವೆ ಗುರುತಿಸಲಾಗಿದ್ದು ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಜನರಿಗೆ ತೊಂದರೆ ಉಂಟಾಗುತ್ತಿದೆ.
ಕಾಮಗಾರಿಗೆ ಕೆರೆ ಮಣ್ಣು ಬಳಕೆ: ಹಂಪಾಪುರ ಗ್ರಾಮದ ಮುಖ್ಯರಸ್ತೆಯ ಸೇತುವೆಗೆ ಅಡಿಪಾಯ ಸರಿಯಾಗಿ ಹಾಕಿಲ್ಲ. ಗುಣಮಟ್ಟವಿಲ್ಲದ ಕಳಪೆ ಮಣ್ಣು ಸುರಿಯಲಾಗಿದೆ ಎಂಬ ದೂರುಗಳು ವ್ಯಾಪಕವಾಗಿವೆ. ಸೇತುವೆಯ ಮೇಲ್ಭಾಗ ದಲ್ಲಿ ಹಳ್ಳಗುಂಡಿಗಳು ಉಂಟಾಗಿ ಮಳೆಯ ನೀರು ನಿಲ್ಲುತ್ತಿದೆ. ಸೇತುವೆಯ ಎರಡು ಕಡೆಗಳಲ್ಲಿ ಸುರಿದಿರುವ ಮಣ್ಣು ಕುಸಿಯುತ್ತಿದೆ.
