ಉದಯವಾಹಿನಿ, ರಾಮನಗರ: ‘ಜಿಲ್ಲೆಯ ಮುಕುಟದಂತಿರುವ ರಾಮದೇವರ ಬೆಟ್ಟದಲ್ಲಿ ಶ್ರೀರಾಮನ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡುವ ಕುರಿತು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಜೊತೆಗೆ, ಭಕ್ತರ ಅನುಕೂಲಕ್ಕಾಗಿ ಬೆಟ್ಟದಲ್ಲಿ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.
ನಗರದ ಹೊರವಲಯದಲ್ಲಿರುವ ರಾಮದೇವರ ಬೆಟ್ಟಕ್ಕೆಅಧಿಕಾರಿಗಳು ಮತ್ತು ಬೆಂಬಲಿಗರೊಂದಿಗೆ ಬುಧವಾರ ಹತ್ತಿ ಅಲ್ಲಿನ ಕುಂದುಕೊರತೆಗಳನ್ನು ವೀಕ್ಷಿಸಿದ ಅವರು, ನಂತರ, ಬೆಟ್ಟದಲ್ಲಿರುವ ದೇವಾಲಯದ ರಾಮಗಿರಿ ಸೇವಾ ಟ್ರಸ್ಟ್ ಪ್ರಮುಖರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
‘ದೇಶವೇ ರಾಮನಗರದತ್ತ ತಿರುಗಿ ನೋಡುವಂತಹ ಪ್ರತಿಮೆ ನಿರ್ಮಿಸುವುದಕ್ಕಾಗಿ ಮಾಜಿ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಪುರಾಣ ಪ್ರಸಿದ್ಧವಾದ ಬೆಟ್ಟದಲ್ಲಿ ಸೌಕರ್ಯಗಳ ಕೊರತೆ ಬಗ್ಗೆ ಸಾರ್ವಜನಿಕರು, ಪ್ರವಾಸಿಗರು ಹಾಗೂ ಭಕ್ತರು ಹಿಂದೆಯೂ ಅಹವಾಲು ಸಲ್ಲಿಸಿ ಬೆಟ್ಟ ಅಭಿವೃದ್ಧಿಗೆ ಮನವಿ ಮಾಡಿದ್ದರು’ ಎಂದರು.
‘ಆ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಭೇಟಿ ನೀಡಿ ಇಲ್ಲಿನ ರಸ್ತೆ ಅಭಿವೃದ್ಧಿ, ಶೌಚಾಲಯ ವ್ಯವಸ್ಥೆ ಸೇರಿದಂತೆ ಇಲ್ಲಿಗೆ ಬೇಕಾದ ಅಗತ್ಯ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದ್ದೇನೆ. ಆದಷ್ಟು ಬೇಗ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ. ಬೆಟ್ಟಕ್ಕೆ ತೆರಳಲು ಅರಣ್ಯ ಇಲಾಖೆಯವರು ಪ್ರವೇಶ ಶುಲ್ಕ ಸಂಗ್ರಹಿಸಬಾರದು ಎಂಬ ಬೇಡಿಕೆ ಇದ್ದು, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವೆ’ ಎಂದು ತಿಳಿಸಿದರು.
ತಹಶೀಲ್ದಾರ್ ತೇಜಸ್ವಿನಿ, ನಗರಸಭೆ ಪೌರಾಯುಕ್ತ ಜಯಣ್ಣ, ಶ್ರೀ ರಾಮಗಿರಿ ಸೇವಾ ಸಮಿತಿ ಅಧ್ಯಕ್ಷ ಎಸ್. ನರಸಿಂಹಯ್ಯ, ಗೌರವಾಧ್ಯಕ್ಷ ಶೇಷಾದ್ರಿ ಅಯ್ಯರ್, ಖಜಾಂಚಿ ಪದ್ಮನಾಭ್, ಸಹ ಕಾರ್ಯದರ್ಶಿಗಳಾದ ಯತೀಶ್, ಡೇರಿ ವೆಂಕಟೇಶ್, ಜಗದೀಶ್, ಅರ್ಚಕ ನಾಗರಾಜು ಭಟ್, ಹರಿಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಕಾಂಗ್ರೆಸ್ ಮುಖಂಡರಾದ ಸಿಎನ್ಆರ್ ವೆಂಕಟೇಶ್, ಸಂತೋಷ್ ಪಿ, ನಾಗರಾಜು, ಗುರುಪ್ರಸಾದ್, ಅನಿಲ್ಜೋಗೇಂದರ್, ಗುರುಪ್ರಸಾದ್, ವಾಸು, ಶ್ರೀನಿವಾಸ್, ಪಾದರಹಳ್ಳಿ ಮಹದೇವು, ಪರ್ವೇಜ್ ಪಾಷ, ವಸೀಂ, ಆಯೇಷಾ, ಪವಿತ್ರಾ, ಗಿರಿಜಮ್ಮ ಹಾಗೂ ಇತರರು ಇದ್ದರು.
