ಉದಯವಾಹಿನಿ , ದೇವನಹಳ್ಳಿ: ದೇಶಾದ್ಯಂತ ೭೮ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ “ಹರ್ ಘರ್ ತಿರಂಗಾ” ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಸ್ವಾತಂತ್ರ ಸಂಭ್ರಮವನ್ನು ವೈವಿದ್ಯಮಯವಾಗಿ ಮತ್ತು ವರ್ಣರಂಜಿತವಾಗಿ ಆಚರಿಸಲಾಗುತ್ತಿದ್ದು, ಈ ಸಂಭ್ರಮದ ಒಂದು ಭಾಗವಾಗಿ “ಹರ್ ಘರ್ ತಿರಂಗಾ” ಎಂಬ ಘೋಷವಾಕ್ಯದೊಂದಿಗೆ ೨೦೨೪ ರ ಆಗಸ್ಟ್ ೧೩ ರಿಂದ ೧೫ ರವರೆಗೆ ದೇಶದ ಪ್ರತಿ ಮನೆ-ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ, ದೇಶ ಭಕ್ತಿ ದೇಶಾಭಿಮಾನ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸಿ ದಾಖಲಿಸುವಂತೆ ಕರೆ ನೀಡಿ “ಹರ್ ಘರ್ ತಿರಂಗಾ” ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ತಿಳಿಸಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ’ಹರ್ ಘರ್ ತಿರಂಗಾ’ ಅಭಿಯಾನದಡಿ ರಾಷ್ಟ್ರಧ್ವಜದ ಮಹತ್ವದ ಕುರಿತು ಚರ್ಚಾ ಸ್ಫರ್ಧೆಗಳನ್ನು, ಸಂಗೀತ ಕಛೇರಿಗಳನ್ನು ನಡೆಸುವುದು ಹಾಗೂ ಸ್ವಾತಂತ್ರಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಾಗೂ ತ್ರಿವರ್ಣ ಧ್ವಜಗಳನ್ನು ಇಡಿದು ಯಾತ್ರಗಳನ್ನು, ಮ್ಯಾರಥನ್, ಮೆರವಣಿಗಳನ್ನು ಮಾಡಿ ಸ್ವಾತಂತ್ರೋತ್ಸವಕ್ಕೆ ಸಂಬಂಧಿಸಿದ ಗಾಯನಗಳನ್ನು ಹಾಡುವ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಲಾಗುವುದು. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಾ ಪಂಚಾಯಿತಿಗಳಲ್ಲಿ ’ಹರ್ ಘರ್ ತಿರಂಗಾ’ ಅಭಿಯಾನ ಕಾರ್ಯಕ್ರಮಕ್ಕೆ ಯಾತ್ರಗಳನ್ನು, ಮ್ಯಾರಥನ್, ಮೆರವಣಿಗಳು, ಬೈಕ್, ಸೈಕಲ್, ಕಾರ್ ರ್ಯಾಲಿಗಳನ್ನು ಆಗಸ್ಟ್ ೧೨ ಮತ್ತು ೧೩ ರಂದು ಆಯೋಜಿಸಲಾಗುವುದು.
