ಉದಯವಾಹಿನಿ, ಮೈಸೂರು: ನಾಡಹಬ್ಬ ದಸರೆ ನಮ್ಮ ಹಬ್ಬ, ನಮ್ಮ ಮನೆಯ ಹಬ್ಬವೆಂಬ ಮನಸ್ಥಿತಿಯೊಂದಿಗೆ ದೀಪಾಲಂಕಾರ ಮಾಡಿ ದಸರಾ ಉತ್ಸವದ ಅಂದ ಹೆಚ್ಚಿಸಬೇಕು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.

ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಈ ಬಾರಿ ದಸರಾ ಮಹೋತ್ಸವದ ವಿದ್ಯುತ್ ದೀಪಾಲಂಕಾರ 21 ದಿನಗಳಿರುತ್ತವೆ. ಹೀಗಾಗಿ ಹೆಚ್ಚು ಮುತುವರ್ಜಿಯಿಂದ ಇದನ್ನು ನಿರ್ವಹಿಸಬೇಕಿದೆ ಎಂದರು.
ದಸರಾ ಆಚರಣೆ ಮತ್ತು ದೀಪಾಲಂಕಾರ ನಮ್ಮ ಬದ್ಧತೆ ಎಂಬ ಮನಸ್ಥಿತಿಯೊಂದಿಗೆ ಎಲ್ಲರೂ ಒಂದಾಗಿ ಆಚರಣೆ ಮಾಡಬೇಕಿದೆ. ಹೀಗಾಗಿ ಇದೇ ಮನಸ್ಥಿತಿಯೊಂದಿಗೆ ದಸರಾ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ಅದರ ಅಂದ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ, ಎಲ್ಲರೂ ಒಂದಾಗಿ ದಸರಾ ಆಚರಿಸೋಣ. ಗುತ್ತಿಗೆದಾರರ ಯಾವುದೇ ಸಮಸ್ಯೆಗಳಿದ್ದರೂ ಎಲ್ಲವನ್ನೂ ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಬಾರಿಯ ದಸರಾ ಮಹೋತ್ಸವದಲ್ಲಿ 21 ದಿನಗಳವರೆಗೂ ವಿದ್ಯುತ್ ದೀಪಾಲಂಕಾರ ಇರಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳು ಉನ್ನತ ಮಟ್ಟದ ಸಭೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಆರಂಭದಿಂದ ಕೊನೆವರೆಗೂ ದೀಪಾಲಂಕಾರದ ಅಂದ ಉಳಿಯುವಂತೆ ನೋಡಿಕೊಳ್ಳಬೇಕಿದೆ. ಅಲ್ಲದೇ, ಬಹುತೇಕರು ದಸರಾ ಜಂಬೂಸವಾರಿ ಮೆರವಣಿಗೆ ಮುಗಿದ ನಂತರದಲ್ಲಿ ದೀಪಾಲಂಕಾರ ವೀಕ್ಷಣೆಗಾಗಿ ಬರುತ್ತಾರೆ. ಹೀಗಾಗಿ ಕಡೆಯ 8-10 ದಿನಗಳು ದೀಪಾಲಂಕಾರ ನಿರ್ವಹಣೆ ಮಾಡುವುದು ಸವಾಲಾಗಲಿದೆ ಎಂದರು.

 

Leave a Reply

Your email address will not be published. Required fields are marked *

error: Content is protected !!