ಉದಯವಾಹಿನಿ, ಮಂಗಳೂರು: ಇದು ಈ ಮೂವರು ಯುವತಿಯರ ಕೊನೆಯ ಕ್ಷಣದ ದೃಶ್ಯಗಳು.. ಒಬ್ಬಳನ್ನು ಕಾಪಾಡಲು ಹೋದ ಮತ್ತೊಬ್ಬಳು, ಆ ಇಬ್ಬರ ರಕ್ಷಣೆಗೆ ಹೋದ ಇನ್ನೊಬ್ಬಳು.. ಹೀಗೆ ಮೂವರೂ ಈಜುಕೊಳದ ನೀರಿನಲ್ಲಿ ಕಾಪಾಡಿ ಕಾಪಾಡಿ ಅಂತಾ ಕಿರುಚಾಡುತ್ತಾ ಪ್ರಾಣಬಿಟ್ಟ ದುರಂತ ದೃಶ್ಯಗಳಿವು. ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರದ ಉಚ್ಚಿಲದ ಬಳಿಯ ಸಮುದ್ರ ತೀರದಲ್ಲೊಂದು ರೆಸಾರ್ಟ್. ವೀಕೆಂಡ್ ಎಂಜಾಯ್​ ಮಾಡೋಕೆ ಇದಕ್ಕಿಂತ ಬೇರೆ ಜಾಗ ಬೇಕಿರಲಿಲ್ಲ. ನಿನ್ನೆ (ನವೆಂಬರ್ 16) ಮೂವರು ಮೈಸೂರು ಮೂಲದ ಯುವತಿಯರು ಇದೇ ಜಾಗಕ್ಕೆ ಬಂದಿದ್ದಾರೆ. ಆದ್ರೆ ಹಾಗೆ ಬಂದವರು ಮತ್ತೆ ವಾಪಾಸ್ ಹೋಗಲೇ ಇಲ್ಲ. ಈಜುಕೊಳದ ನೀರಿನಲ್ಲಿ ಉಸಿರು ಚೆಲ್ಲಿದ್ದಾರೆ.

ಮೂವರು ಯುವತಿಯರು ರೆಸಾರ್ಟ್​ನ ಈಜುಕೊಳಕ್ಕಿಳಿದಿದ್ದಾರೆ. ಹೀಗೆ ಇಳಿದ ಮೂವರ ಪೈಕಿ ಒಬ್ಬಳು ಸ್ವಿಮ್ಮಿಂಗ್ ಪೂಲ್​ನಲ್ಲೇ ಇದ್ದ ಟ್ಯೂಬ್ ತರಲು ತೆರಳಿದ್ದಾಳೆ. ಆದ್ರೆ ಆಳ ಇದ್ದ ಕಾರಣ ಟ್ಯೂಬ್ ತಾರದೆ ವಾಪಸ್ ಆಗಿದ್ದಳು. ಹೀಗೆ ವಾಪಸ್ ಬಂದ ಯುವತಿ ತನ್ನಿಬ್ಬರು ಸ್ನೇಹಿತರಿದ್ದ ಕಡೆ ಬರ್ತಾಳೆ. ಆದ್ರೆ ಅದೇನಾಯ್ತೋ ಏನೋ ಮತ್ತೆ ಎಡಭಾಗದತ್ತ ಒಂದು ಹೆಜ್ಜೆ ಇಡ್ತಿದ್ದಂತೆ ಆಯತಪ್ಪಿದ್ದಾಳೆ. ಅಪಾಯವನ್ನು ಅರಿತ ಪಕ್ಕದಲ್ಲಿದ್ದ ಯುವತಿ ರಕ್ಷಣೆಗೆ ಧಾವಿಸಿದ್ದಾಳೆ. ತನ್ನ ಗೆಳತಿಯ ರಕ್ಷಣೆಗೆ ಅಂತಾ ಕೈಚಾಚಿದ ಎರಡನೇ ಯುವತಿ ಕೂಡಾ ನೋಡನೋಡ್ತಿದ್ದಂತೆ ಆಳಕ್ಕೆ ಜಾರಿಹೋಗ್ತಾಳೆ. ಹೀಗೆ ಓರ್ವ ಗೆಳತಿಯ ರಕ್ಷಣೆ ಹೋಗಿದ್ದ ಇಬ್ಬರು ಸೇರಿದಂತೆ ಮೂವರು ಯುವತಿ ದುರಂತ ಅಂತ್ಯಕಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!