ಉದಯವಾಹಿನಿ, ಮೈಸೂರು: ಶ್ರೀ ಶಾರದಾ ಪಬ್ಲಿಕ್ ಶಾಲೆಯ ನೂತನ ಎಸ್.ರಾಮನಾಥನ್ ಸ್ಮಾರಕ ಬ್ಲಾಕ್ ಅನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರವಿಂದ್ ಕುಮಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, “ಯಾವುದೇ ವಿದ್ಯಾರ್ಥಿ ಸಾಧಕರಾಗಿ ರೂಪುಗೊಳ್ಳಬೇಕಾದರೆ, ಅದಕ್ಕೆ ಬೇಕಾದ ಮಾನಸಿಕತೆ ಸಿದ್ಧತೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ನಾನು ಗಮನಿಸಿದ ವಿದ್ಯಾರ್ಥಿಯೊಬ್ಬನಿಗೆ ಚಿಕ್ಕವಯಸ್ಸಿನಲ್ಲಿಯೇ ತಾಯಿ ತೀರಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಆತ ತನಗೆ ಬೋಧನೆ ಮಾಡುವ ಶಿಕ್ಷಕಿಯನ್ನೇ ತಾಯಿ ಎಂದು ಭಾವಿಸಿ ವಿದ್ಯಾರ್ಜನೆ ಮಾಡುತ್ತಾನೆ. ಶಿಕ್ಷಕಿಯ ಮಾರ್ಗದರ್ಶನವನ್ನು ಚಾಚೂ ತಪ್ಪದೇ ಪಾಲನೆ ಮಾಡಿದ ವಿದ್ಯಾರ್ಥಿ ದೊಡ್ಡ ಸಾಧನೆ ಮಾಡುತ್ತಾನೆ. ಅಲ್ಲದೇ ತನ್ನ ವಿವಾಹಕ್ಕೆ ತನಗೆ ಅಕ್ಷರ ಕಲಿಸಿದ ಗುರುವನ್ನು ವಿಮಾನದಲ್ಲಿ ಕರೆಸಿಕೊಳ್ಳುತ್ತಾನೆ. ತನ್ಮೂಲಕ ಗುರುಗಳಿಗೆ ಅಗ್ರ ಸ್ಥಾನವನ್ನು ನೀಡಿ ಆರಾಧಿಸುತ್ತಾನೆ. ಹೀಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಕರ ಬಗ್ಗೆ ಅತೀವವಾದ ಗೌರವ ಇಟ್ಟುಕೊಳ್ಳಬೇಕು.
ಅಲ್ಲದೇ ಅವರು ಹೇಳಿದ್ದನ್ನು ಪರಿಪಾಲಿಸುವ ಗುಣ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ,” ಎಂದು ಹೇಳಿದರು.“ಶಾರದಾ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ವಿಶೇಷವಾಗಿ ನಮ್ಮ ಹಿಂದೂ ಸಂಪ್ರದಾಯದಂತೆ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ. ತನ್ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವುದಲ್ಲದೇ, ನಮ್ಮ ಆಚಾರ-ವಿಚಾರ, ಸಂಸ್ಕಾರವನ್ನು ಉಳಿಸಿಕೊಂಡು ಮುಂದುವರಿಸಲು ಕೊಡುಗೆ ನೀಡುತ್ತಿದ್ದಾರೆ. ಈ ಪರಿಪಾಠ ಎಲ್ಲ ಕಡೆ ಅನುಸರಣೆಯಾಗಬೇಕು,” ಎಂದು ಸಲಹೆ ನೀಡಿದರು.
