ಉದಯವಾಹಿನಿ, ಮೈಸೂರು: ದೆಹಲಿಯಲ್ಲಿನ ರೈತ ಹೋರಾಟದ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚಿಸುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯೆತರ) ಸಂಘಟನೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಕಚೇರಿ ಮುಂದೆ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಕಷ್ಟ ನೀಗಿಸಿ, ಅನ್ನದ ಋಣ ತೀರಿಸಿ, ರೈತರಿಗೆ ಭಿಕ್ಷೆ ಬೇಡ, ನ್ಯಾಯ ಬೇಕು ಎಂಬ ಘೋಷಣೆ ಕೂಗಿದರು. ದೆಹಲಿ ರೈತ ಹೋರಾಟದ ರೂವಾರಿ ರಾಷ್ಟ್ರೀಯ ರೈತ ಮುಖಂಡ ಜಗಜೀತ್ ಸಿಂಗ್ ದಲೈವಾಲ ಉಪವಾಸ 17ನೇ ದಿನಕ್ಕೆ ಮುಂದುವರಿದು ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಇಂತಹ ಗಂಭೀರ ಸ್ಥಿತಿಯಲ್ಲಿಯೂ ಸಂಸತ್ ಅಧಿವೇಶ ನಡೆಯುತ್ತಿದ್ದರು ಈ ಸಂಬಂಧ ಚರ್ಚಿಸದೆ ನಿದ್ರೆ ಮಾಡುವಂತೆ ಸಂಸದರು ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೇಂದ್ರದಿಂದ ರಾಜ್ಯಕೆ ಸತತವಾಗಿ ಅನ್ಯಾಯವಾಗುತ್ತಿದ್ದರೂ ನಮ್ಮ ಸಂಸದರು ಸುಮ್ಮನಿದ್ದಾರೆ. ಯಾವುದೇ ವಿಚಾರ ಬಂದರೂ ರಾಜ್ಯದ ಸಂಸದರು ಧ್ವನಿಯೆತ್ತದೆ ಇರುವುದು ಮತ ನೀಡಿದ ಜನರಿಗೆ ಮಾಡುವ ಅಪಮಾನವಾಗಿದೆ ಎಂದರು. ನಾವು ಕೇಂದ್ರ ಸರ್ಕಾರವನ್ನು ಭಿಕ್ಷೆ ಕೇಳುತ್ತಿಲ್ಲ. ನಮ್ಮ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಖಾತರಿಯಾದ ಕಾನೂನು ಕೇಳುತ್ತಿದ್ದೇವೆ. ಪ್ರಧಾನಿ ಮೋದಿಯವರು ಎರಡು ವರ್ಷಗಳ ಹಿಂದೆ ರೈತರಿಗೆ ಭರವಸೆ ನೀಡಿ ಚಳವಳಿ ಕೈಬಿಡುವಂತೆ ಮನವಿ ಮಾಡಿ ಹುಸಿಗೊಳಿಸಿದ್ದಾರೆ ಎಂದು ದೂರಿದರು.
