ಉದಯವಾಹಿನಿ, ಚೆನ್ನೈ: ಕೊಯಮತ್ತೂರಿನಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮತ್ತು ಇತರ ಹಲವು ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. 1998ರ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ ಬಾಷಾ ಅವರನ್ನು ವೈಭವೀಕರಿಸುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಅಣ್ಣಾಮಲೈ ಅವರನ್ನು ಬಂಧಿಸಲಾಗಿದೆ.
ಬಾಷಾ ಜೈಲಿನಿಂದ ಹೊರಬಂದು ಡಿ.17ರಂದು ಮೃತಪಟ್ಟಿದ್ದಾನೆ. ಬಾಂಬ್ ಸ್ಫೋಟ ಪ್ರಕರಣದಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಆದರೆ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ. ಈತನ ಸಾವಿನ ಬಳಿಕ ಸಾವಿರಾರು ಜನರು ಈತನನ್ನು ನೋಡಲು ಆಗಮಿಸಿದರು. ಇದಕ್ಕಾಗಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.
56 ಜನರ ಸಾವಿಗೆ ಕಾರಣನಾದ ಅಪರಾಧಿ ಭಯೋತ್ಪಾದಕನ ಶವಯಾತ್ರೆಗೆ ಅನುಮತಿ ನೀಡಿದ್ದಕ್ಕಾಗಿ ಅಣ್ಣಾಮಲೈ ಅವರು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ಭಯೋತ್ಪಾದಕನ ಸಾವನ್ನು ವೈಭವೀಕರಿಸಲಾಗುತ್ತಿದೆ ಎಂದು ಡಿಎಂಕೆ ಸರ್ಕಾರದ ವಿರುದ್ಧ ಆರೋಪ ಮಾಡಿ ಕಳೆದ ದಿನ ಪ್ರತಿಭಟನೆ ಮಾಡುವ ವೇಳೆ ಅಣ್ಣಾಮಲೈ ಅವರನ್ನು ಪೊಲೀಸರು ಬಂಧಿಸಿದ್ದರು.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಎಸ್ಎ ಬಾಷಾ ಅವರ ಅಂತ್ಯಕ್ರಿಯೆಗೆ ಅನುಮತಿ ನೀಡಿದ್ದಕ್ಕಾಗಿ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಟೀಕಿಸಿ ಪೋಸ್ಟ್ ಮಾಡಿದ್ದಾರೆ.
ಡಿಎಂಕೆ ಸರ್ಕಾರ ಪೊಲೀಸರ ಮೂಲಕ ಹಿಂದೂ ಮುನ್ನಾನಿ ರಾಜ್ಯಾಧ್ಯಕ್ಷ ಕಾಡೇಶ್ವರ್ ಸಿ.ಸುಬ್ರಮಣ್ಯಂ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶಿವಲಿಂಗಂ ಮತ್ತು ನನ್ನನ್ನು ಬಂಧಿಸಿತು ಎಂದು ಹೇಳಿದ್ದಾರೆ.
