ಉದಯವಾಹಿನಿ, ಕೊಣನೂರು: ರಾಮನಾಥಪುರದ ಪ್ರಸನ್ನ ಸುಬ್ರಮಣ್ಯಸ್ವಾಮಿ ಜಾತ್ರೆಗೆ ಭಾನುವಾರ ವಿವಿಧೆಡೆಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಜಾತ್ರೆ ಮೈದಾನ, ದೇವಾಲಯಗಳು ಮತ್ತು ಸ್ನಾನಘಟ್ಟ ಭಕ್ತರಿಂದ ತುಂಬಿತುಳುಕಿತು. ಡಿ.7ರಂದು ಜರುಗಿದ ಸುಬ್ರಮಣ್ಯಸ್ವಾಮಿ ರಥೋತ್ಸವದಿಂದ ಆರಂಭವಾಗಿರುವ ಜಾತ್ರೆಯು ತುಳು ಷಷ್ಠಿಯವರೆಗೂ ಜರುಗಲಿದ್ದು, ಒಂದು ತಿಂಗಳಕಾಲ ಪ್ರತಿನಿತ್ಯವೂ ಭಕ್ತರು ಭೇಟಿ ನೀಡುತ್ತಾರೆ. ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ವಿವಿಧೆಡೆಗಳಿಂದ ರಾಮನಾಥಪುರಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದ ಕಾರಣ ಜನಜಂಗುಳಿಯಿತ್ತು. ಜಾತ್ರೆಗೆ ಬಂದ ಬಹುತೇಕ ಭಕ್ತರು ಇಲ್ಲಿನ ಕಾವೇರಿ ಸ್ನಾನಘಟ್ಟದಲ್ಲಿ ಸ್ನಾನಮಾಡಿದರು. ಗೋಗರ್ಭ ಶಿಲೆಯ ಕೆಳಗೆ ನುಸುಳಿದರೆ ಪಾಪ ಪರಿಹಾರ ಎಂಬ ನಂಬಿಕೆಯಿಂದ ಗೋಗರ್ಭ ಶಿಲೆಯ ಬಳಿ ಭಕ್ತರೆ ದೊಡ್ಡಗುಂಪು ಜಮಾಯಿಸಿತ್ತು. ಭಕ್ತರು ಸುಬ್ರಮಣ್ಯಸ್ವಾಮಿ ದೇವಾಲಯಲ್ಲಿ ಹರಕೆ ತೀರಿಸಿ, ವಾಸಾಂಜನೇಯ, ಅಗಸ್ತೇಶ್ವರ, ಪಟ್ನಾಭಿರಾಮ, ರಾಘವೇಂದ್ರಮಠ, ವರದಾನ ಬಸವೇಶ್ವರ, ಚತುರ್ಮುಖ ಮೂರ್ತಿ ರಾಮೇಶ್ವರ ಸೇರಿದಂತೆ ವಿವಿಧ ದೇವಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ರಾಮೇಶ್ವರ ದೇವಾಲಯದ ಬಳಿ ವಹಿ ಪುಷ್ಕರಿಣಿಯಲ್ಲಿರುವ ಮೀನುಗಳಿಗೆ ತಾವು ತಂದಿದ್ದ ಬುತ್ತಿ, ಕಡಲೆಕಾಯಿ ಜೋಳದಪುರಿ ಹಾಕಿ ನಂತರ ಗುಂಪುಗುಂಪಾಗಿ ಕುಳಿತು ಬುತ್ತಿಯನ್ನು ಕುಟುಂಬ ಸಮೇತ ತಿಂದರು.
