ಉದಯವಾಹಿನಿ, ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ ಎಂದು ಸಭಾಪತಿ ಯವರು ಹೇಳಿರಬಹುದು. ಆದರೆ ಪೊಲೀಸರು ತಮ ಕರ್ತವ್ಯವನ್ನು ತಾವು ಮಾಡುತ್ತಾರೆ, ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿಐಡಿ ತನಿಖೆ ನಡೆಸುವ ಹಂತದಲ್ಲಿ ತಾವು ಏನನ್ನೂ ಹೇಳಲು ಬಯಸುವುದಿಲ್ಲ. ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರೆಸಲಿದ್ದಾರೆ. ಸತ್ಯಾ ಸತ್ಯತೆಯ ಪರಿಶೀಲನೆ ನಡೆಯಲಿದೆ.
ಸಿ.ಟಿ.ರವಿ ತಾವು ಆ ರೀತಿ ಹೇಳಿಲ್ಲ ಎಂದು ಹೇಳಿದ್ದಾರೆ. ವಿಧಾನ ಪರಿಷತ್ ಸಭಾಂಗಣದಲ್ಲಿ ರವಿ ಅವರ ಪಕ್ಕದಲ್ಲಿ ಇದ್ದವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದ ಬಳಸಿರುವುದು ನಿಜ ಎಂದು ಹೇಳುತ್ತಿದ್ದಾರೆ. ಎಲ್ಲವನ್ನೂ ಸಿಐಡಿ ಪೊಲೀಸರು ಪರಿಶೀಲನೆ ನಡೆಸುತ್ತಾರೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಮ ಕೆಲಸವನ್ನು ತಾವು ಮಾಡಿದ್ದಾರೆ. ಹಾಗಾಗಿ ಪ್ರಕರಣವನ್ನು ಮುಗಿದ ಅಧ್ಯಾಯ ಎಂದು ಹೇಳಿರಬಹುದು. ಆದರೆ ಪೊಲೀಸರು ತಮ ಕರ್ತವ್ಯ ನಿಭಾಯಿಸಲಿದ್ದಾರೆ. ಸಿ.ಟಿ.ರವಿ ನೀಡಿರುವ ದೂರು ಆಧರಿಸಿ ಐದು ದಿನಗಳ ಬಳಿಕ ಎಫ್ಐಆರ್ ದಾಖಲಿಸಲು, ಸವಿಸ್ತಾರವಾದ ವಿಚಾರಣೆ ನಡೆಸಬೇಕಿತ್ತು. ಸಭಾಪತಿ ಅವರ ಗಮನಕ್ಕೆ ತರಬೇಕಿತ್ತು. ಪೊಲೀಸರು ಅದನ್ನೆಲ್ಲಾ ಮಾಡಿದ ಬಳಿಕ ಪ್ರಕರಣ ದಾಖಲಿಸಿದ್ದಾರೆ ಎಂದರು.
