ಉದಯವಾಹಿನಿ,ಬೆಂಗಳೂರು: ಕಳಪೆ ಔಷಧಿಯಿಂದಾಗಿ ಬಾಣಂತಿಯರ ಸಾವಿನ ಪ್ರಕರಣಗಳ ಸರಣಿ ಮುಂದುವರೆದಿರುವ ನಡುವೆಯೇ, ರೋಗನಿರೋಧಕ ಲಸಿಕೆ ಪಡೆದ ಬಳಿಕ ಅಸ್ವಸ್ಥಗೊಂಡ ಎರಡು ಹಸುಗೂಸುಗಳು ಮೃತಪಟ್ಟಿರುವ ಘಟನೆ ಕುಣಿಗಲ್ ತಾಲ್ಲೂಕಿನಲ್ಲಿ ನಡೆದಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಕುಣಿಗಲ್ ತಾಲ್ಲೂಕಿನಲ್ಲಿ ಲಸಿಕೆ ಪಡೆದ ಕೆಲ ಸಮಯದ ಬಳಿಕ ಮಕ್ಕಳು ಅಸ್ವಸ್ಥಗೊಂಡು ಮೃತಪಟ್ಟಿವೆ. ಈ ಸಾವಿಗೆ ಲಸಿಕೆಯ ಅಡ್ಡಪರಿಣಾಮ ಕಾರಣವಾಗಿರಬಹುದೇ ಎಂಬ ಬಗ್ಗೆ ಹೆಚ್ಚಿನ ಪರಿಶಿಲನೆ ನಡೆಯುತ್ತಿದೆ.
ಜ.2 ಮತ್ತು 3 ರಂದು ಕುಣಿಗಲ್ ತಾಲ್ಲೂಕಿನ ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 4 ಮಕ್ಕಳಿಗೆ ಪೆಂಟಾ 1 ಲಸಿಕೆ ಹಾಕಲಾಗಿದೆ. ಅದರಲ್ಲಿ 1, 2 ಮತ್ತು 4ನೇ ಮಗು ಆರೋಗ್ಯವಾಗಿವೆ. 3ನೇ ಮಗು ರಾತ್ರಿ ಹಾಲು ಕುಡಿದು ಮಲಗಿದ ಬಳಿಕ ಬೆಳಗಿನ ಜಾವ ಅಸ್ವಸ್ಥಗೊಂಡಿದೆ. ಪೋಷಕರು ತಕ್ಷಣವೇ ಕುಣಿಗಲ್ನ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆ ವೇಳೆಗಾಗಲೇ ಮಗು ಮೃತಪಟ್ಟಿತ್ತು ಎಂದು ಸ್ಥಾನಿಕ ವೈದ್ಯರು ದೃಢಪಡಿಸಿದ್ದಾರೆ.
