ಉದಯವಾಹಿನಿ, ಮಂಡ್ಯ :– ಜಿಲ್ಲಾ ಹಾಲು ಒಕ್ಕೂಟ (ಮನ್ ಮುಲ್) ರೈತರಿಂದ ಖರೀದಿಸುವ ಹಾಲಿನ ದರ ಕಡಿತ ಹಿಂಪಡೆದಿದ್ದು, ಪ್ರತಿ ಲೀಟರ್ ಹಾಲಿಗೆ ಜೂ.11ರಿಂದಲೇ ಅನ್ವಯವಾಗುವಂತೆ ಲೀಟರ್ ಗೆ 32.25 ನೀಡಿ ಖರೀದಿಸುವುದಾಗಿ ತಿಳಿಸಿದೆ. ಮನ್ ಮುಲ್ ಪ್ರಸ್ತುತ ದಿನಂಪ್ರತಿ ಸರಾಸರಿ 9.89 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿದೆ.ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ರೈತರಿಗೆ ಬೇಸಿಗೆ ಕಾಲದಲ್ಲಿ ಉಂಟಾಗುವ ಗುಣಮಟ್ಟ ಮತ್ತು ಇಳುವರಿ ನಷ್ಟವನ್ನು ಸರಿದೂಗಿಸಲು, ಪ್ರತಿ ಲೀಟರ್ ಹಾಲಿಗೆ ರೂ.2 ನ್ನು ವಿಶೇಷ ಬೇಸಿಗೆ ಪ್ರೋತ್ಸಾಹಧನವನ್ನಾಗಿ ಏಪ್ರಿಲ್ ಮತ್ತು ಮೇ-2023ರ ಮಾಹೆಗಳಿಗೆ ಮಾತ್ರ ನೀಡಲಾಗಿತ್ತು. ಆದರೆ ಮೇ 16 ರಂದು ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ರೂ.2ರ ವಿಶೇಷ ಬೇಸಿಗೆ ಪ್ರೋತ್ಸಾಹಧನದ ಪೈಕಿ ರೂ.1 ಮಾತ್ರ ಕಡಿತಗೊಳಿಸಿ, ರೂ.1ನ್ನು ಮುಂದುವರೆಸಲಾಗಿತ್ತು.ಆದರೆ, ಈ ನಿರ್ಧಾರಕ್ಕೆ ಹಾಲು ಉತ್ಪಾದಕರು ಎಲ್ಲೆಡೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಹಾಲಿನ ದರ ಕಡಿತ ಸರಿಯಲ್ಲ ಎಂದು ಪ್ರತಿಕ್ರಿಯಿಸಿ, ಕಡಿತ ಹಿಂಪಡೆಯುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮನ್ ಮುಲ್, ದರ ಕಡಿತವನ್ನು ಕೈ ಬಿಟ್ಟಿದೆ. ಅದರಂತೆ ಮುಂಬರುವ ಜೂ.11ರಿಂದ ಅನ್ವಯವಾಗುವಂತೆ ಹಾಲು ಉತ್ಪಾದಕರಿಂದ ಖರೀದಿ ಮಾಡುವ ಹಾಲಿನ ದರವನ್ನು ರೂ.1 ಹೆಚ್ಚಿಸಿ, ಶೇ.4.0 ಜಿಡ್ಡು ಮತ್ತು ಶೇ.8.5 ಜಿಡ್ಡೇತರ ಘನಾಂಶ ಇರುವ ಪ್ರತಿ ಲೀಟರ್ ಹಾಲಿಗೆ ರೂ.31.25ರ ಬದಲಾಗಿ ರೂ.32.25ರಂತೆ ನಿಗದಿಪಡಿಸಲು ತೀರ್ಮಾನಿಸಲಾಗಿದೆ ಎಂದು ಮನ್ ಮುಲ್ ತಿಳಿಸಿದೆ.
