ಉದಯವಾಹಿನಿ, ಕೊಪ್ಪಳ: ಗವಿಮಠದ ಜಾತ್ರೆಯ ಅಂಗವಾಗಿ ಮೊದಲ ಬಾರಿಗೆ ಆಯೋಜಿಸಲಾಗಿರುವ ಗವಿಶ್ರೀ ಕ್ರೀಡಾ ಉತ್ಸವದಲ್ಲಿ ಗುರುವಾರ ದಿನಪೂರ್ತಿ ದೇಶಿ ಕ್ರೀಡೆಗಳ ಸಂಗಮ ಕಂಡುಬಂದಿತು. ಅನುಭವಿ ಕುಸ್ತಿಪಟು ರಾಣೆಬೆನ್ನೂರಿನ ಕಾರ್ತಿಕ್ ಕಾಟೆ ‘ಕೊಪ್ಪಳ ಕೇಸರಿ’ ಪ್ರಶಸ್ತಿ ಪಡೆದುಕೊಂಡರು.
ಕೆಂಪು ಮಣ್ಣಿನ ಅಖಾಡದಲ್ಲಿ ದೂಳೆಬ್ಬಿಸಿದ ಪೈಲ್ವಾನರು ಪರಸ್ಪರ ಚಿತ್ ಮಾಡಲು ಇನ್ನಿಲ್ಲದ ಕಸರತ್ತು ನಡೆಸಿದರು. ಒಬ್ಬ ಪೈಲ್ವಾನ್ ಪಟ್ಟು ಹಾಕಿದರೆ, ಎದುರಾಳಿ ಮರುಪಟ್ಟು ಹಾಕಿದಾಗ ಕುಸ್ತಿ ಪ್ರೇಮಿಗಳು ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಸಾಕಷ್ಟು ಸಂಖ್ಯೆಯಲ್ಲಿ ಜನ ಕುಸ್ತಿ ಪಂದ್ಯಾವಳಿಗಳನ್ನು ನೋಡಲು ಸೇರಿದ್ದರು, ಪುರುಷರ ಜಿದ್ದಾಜಿದ್ಧಿಯಲ್ಲಿ ಸಂಪೂರ್ಣ ಶಕ್ತಿ ತೋರಿಸಿದ ಕಾರ್ತಿಕ್ ಮಹಾರಾಷ್ಟ್ರದ ವಿಕಾಸಧಾತ್ರಾ ಎದುರು ಜಯಭೇರಿ ಮೊಳಗಿಸಿದರು.
ಕುಸ್ತಿಯ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಗದಗನ ವೈಷ್ಣವಿ ಕಲಾ ವರಲಕ್ಷ್ಮೀ, ದಾವಣಗೆರೆಯ ಸೃಷ್ಟಿ ಕೊಪ್ಪಳದ ಸತ್ಯಮರಿಶಾಂತವೀರ ಹಾಗೂ ಹಳಿಯಾಳದ ಸವಿತಾ ಸಿದ್ದು ಗೆಲುವು ಸಾಧಿಸಿದರು. ಮುಧೋಳದ ಪ್ರತೀಕ್ಷಾ ಹಾಗೂ ಭುವನೇಶ್ವರಿ ಕೋಳಿವಾಡ ನಡುವಿನ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿತು.
ಗ್ರಾಮೀಣ ಪ್ರದೇಶದ ಸೊಗಡು ಅನಾವರಣಗೊಳಿಸುವ ಎತ್ತಿನ ಬಂಡಿ ಜಗ್ಗುವ ಸ್ಪರ್ಧೆ ಗಮನ ಸೆಳೆಯಿತು. ಯಲಬುರ್ಗಾದ ಬಸವರಾಜ
ಶಿಡ್ಲಬಾವಿ, ಗೋಪಾಲಕೃಷ್ಣ ಕಿಡದೂರು ಹಾಗೂ ವಿಜಯಕುಮಾರ ಚಳ್ಳೂರು ಕ್ರಮವಾಗಿ ಮೊದಲ ಸ್ಥಾನಗಳನ್ನು ಪಡೆದುಕೊಂಡರು.
