ಉದಯವಾಹಿನಿ, ಆಲೂರು: ಎತ್ತಿನಹೊಳೆ ಯೋಜನೆಯಡಿ ನೀರು ಹರಿಸುವ ಉದ್ದೇಶದಿಂದ ಕಾಮತಿಕೂಡಿಗೆ ಬಳಿ ಆಲೂರು-ಬಿಕ್ಕೋಡು ರಸ್ತೆಯನ್ನು ತುಂಡು ಮಾಡಲಾಗಿದೆ. ಕಾಮಗಾರಿ ಮುಗಿದ ನಂತರ ರಸ್ತೆಯನ್ನು ಮಣ್ಣಿನಿಂದ ಮುಚ್ಚಲಾಗಿದ್ದು, ಮಳೆಗಾಲದಲ್ಲಿ ಗುಂಡಿಗಳಾಗಿವೆ. ಬೇಸಿಗೆಯಲ್ಲಿ ದೂಳು ತುಂಬಿದ್ದು, ಜನಸಾಮಾನ್ಯರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಮಣ್ಣು ಮುಚ್ಚಿ 2-3 ವರ್ಷ ಕಳೆದರೂ, ಡಾಂಬರು ಹಾಕದೇ ಅಲ್ಲಲ್ಲಿ ಗುಂಡಿಗಳಾಗಿವೆ. ಹಲವಾರು ವಾಹನಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿವೆ. ರಸ್ತೆ ಎರಡೂ ಬದಿಯಲ್ಲಿ ತಡೆಗೋಡೆಗಳನ್ನು ಹಾಕದೇ ಪ್ರಯಾಣಿಕರ ಪ್ರಾಣದೊಡನೆ ಇಲಾಖೆ ಚೆಲ್ಲಾಟ ಆಡುತ್ತಿದೆ. ರಾತ್ರಿ ವೇಳೆಯಲ್ಲಿ ಎದುರಿನಿಂದ ವಾಹನಗಳು ಬಂದಾಗ, ದಾರಿ ಬಿಡಲು ರಸ್ತೆ ಬದಿಗೆ ತೆರಳಿದಾಗ, ಅಪಘಾತಗಳಾಗುವ ಸಾಧ್ಯತೆ ಹೆಚ್ಚಾಗಿದೆ.
