ಉದಯವಾಹಿನಿ, ಬೆಂಗಳೂರು: ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಎಂದು ನಂಬಿಸಿ ಕೋಟಿ ಕೋಟಿ ವಂಚನೆ ಮಾಡಿದ ಪ್ರಕರಣದ ಸಂಬಂಧ ಆರೋಪಿ ಐಶ್ವರ್ಯಗೌಡ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ವಂಚನೆ ಪ್ರಕರಣದ ಸಂಬಂಧ ನಾಲ್ವರು ಸಿಡಿಆರ್ ಪಡೆದುಕೊಂಡ ಸಂಬಂಧ ಎಫ್ಐಆರ್ ದಾಖಲಾದ ಬೆನ್ನಲ್ಲೇ, ಸಿಡಿಆರ್ ಪಡೆದ ಪ್ರಕರಣದ ತನಿಖೆಗಾಗಿಯೇ ಹೊಸ ತನಿಖಾಧಿಕಾರಿಯನ್ನು ನೇಮಕ ಮಾಡಲಾಗಿದೆ.ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ಪ್ರಾಥಮಿಕ ತನಿಖೆಯಲ್ಲಿ ಐಶ್ವರ್ಯಗೌಡ ರಾಮನಗರದ ಹಲವು ರಾಜಕೀಯ ಮುಖಂಡರ ಸಿಡಿಆರ್ ಸಂಗ್ರಹ ಮಾಡಿರುವುದು ಗೊತ್ತಾಗಿದೆ. ಇದಕ್ಕೆ ಕೆಲ ಪೊಲೀಸ್ ಅಧಿಕಾರಿಗಳನ್ನು ಕೂಡ ಬಳಸಿಕೊಂಡು ಅವರ ಜೊತೆಗೆ ಹಣದ ವ್ಯವಹಾರ ನಡೆಸಿದ್ದಾಳೆ. ಯಾವುದೇ ಪ್ರಕರಣದ ತನಿಖಾಧಿಕಾರಿಗೆ ಮಾತ್ರ ಸಿಡಿಆರ್ ಪಡೆಯುವ ಅಧಿಕಾರವಿದ್ದು, ಐಶ್ವರ್ಯಗೌಡ ಹೇಗೆ ರಾಜಕೀಯ ಮುಖಂಡರ ಸಿಡಿಆರ್ ಪಡೆದುಕೊಂಡಿದ್ದಾಳೆ. ಅದನ್ನು ಹೇಗೆ ಯಾವ ಕಾರಣಕ್ಕೆ ಬಳಸಿಕೊಳ್ಳುತ್ತಿದ್ದಳು ಎನ್ನುವ ಅನುಮಾನ ಪೊಲೀಸರನ್ನು ಕಾಡಿದೆ.ಇದೇ ಕಾರಣಕ್ಕೆ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಸಿಡಿಆರ್ ಪ್ರಕರಣವನ್ನೇ ಪ್ರತ್ಯಕವಾಗಿ ತನಿಖೆಗೆ ಆದೇಶ ನೀಡಲಾಗಿದೆ.
