ಉದಯವಾಹಿನಿ, ಮಾನ್ನಿ: ವಿದ್ಯುತ್ ಅಡಚಣೆ, ಅಸಮರ್ಪಕ ಪೈಪ್ಲೈನ್ ಹಾಗೂ ನಿರ್ವಹಣೆ ವೈಫಲ್ಯದಿಂದ ಪಟ್ಟಣದ ಹಲವು ವಾರ್ಡ್ಗಳಿಗೆ
ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ರಬ್ಬಣಕಲ್ ಬಳಿಯ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ.
ಆದರೆ ಕುಡಿಯುವ ನೀರು ಸರಬರಾಜು ಮಾಡಲು ಎಲ್ಲಾ ವಾರ್ಡ್ಗಳಲ್ಲಿ ಸಮರ್ಪಕವಾದ ಪೈಪ್ಲೈನ್ ವ್ಯವಸ್ಥೆ ಹಾಗೂ ಕುಡಿಯುವ ನೀರು ಸಂಗ್ರಹದ ಟ್ಯಾಕ್ಗಳ ಸೌಲಭ್ಯ ಇಲ್ಲದಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.
ಪಟ್ಟಣದ ಎಲ್ಲಾ ವಾರ್ಡ್ ಗಳಿಗೆ 3 ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿರುವುದಾಗಿ ಸ್ಥಳೀಯ ಪುರಸಭೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪಟ್ಟಣದ 7, 8, 9, 10, 11, 12, 13ನೇ ವಾರ್ಡ್ಗಳ ವ್ಯಾಪ್ತಿಯ ಕೋನಾಪುರಪೇಟೆ, ಸೋನಿಯಾ ಗಾಂಧಿ ನಗರ, ಜನತಾ ಕಾಲೊನಿ, ಜುಮ್ಮಲದೊಡ್ಡಿ, ಬೆಳಗಿನಪೇಟೆ ಮತ್ತಿತರ ಕಡೆ ಕಳೆದ ಐದು ದಿನಗಳಿಂದ ಕುಡಿಯುವ ನೀರು ಸರಬರಾಜು ಆಗಿಲ್ಲ ಎಂದು ವಾರ್ಡ್ ನಿವಾಸಿಗಳು ಭಾನುವಾರ ದೂರಿದ್ದಾರೆ. ಪಟ್ಟಣದ ಬೆಳಗಿನಪೇಟೆಯ ಜನರು ಜುಮ್ಮಲದೊಡ್ಡಿ ಕೆರೆಯ ಚಿಲುಮೆ ನೀರು ಕುಡಿಯಲು ಅವಲಂಬಿಸಿದ್ದು. ಈ ಕೆರೆಯ ಹತ್ತಿರ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
