ಉದಯವಾಹಿನಿ ,ಅಳವಂಡಿ: ಜಿಲ್ಲೆಯ ಅಳವಂಡಿ ಸಮೀಪದ ಹೈದರನಗರ ಮತ್ತು ಹಟ್ಟಿ ಗ್ರಾಮದ ನಡುವೆ ಕೆಕೆಆರ್‌ಟಿಸಿ ಬಸ್ ಪಲ್ಟಿಯಾಗಿ, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯವಾಗಿದೆ.ಕೇಸಲಾಪುರದಿಂದ ಹೈದರನಗರ, ಹಟ್ಟಿ ಮಾರ್ಗವಾಗಿ ಅಳವಂಡಿಗೆ ತೆರಳುವ ಬಸ್ ನಲ್ಲಿ ಸುಮಾರು 70 ಕ್ಕೂ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಇದ್ದರು.ಬಸ್‌ ಪಲ್ಟಿಯಾದ ತಕ್ಷಣ ವಿದ್ಯಾರ್ಥಿಗಳು ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ಪಾಲಕರು ಹಾಗೂ ಗ್ರಾಮಸ್ಥರು ಬಂದು ಪಲ್ಟಿಯಾದ ಬಸ್ ನಲ್ಲಿ ಇದ್ದ ವಿದ್ಯಾರ್ಥಿಗಳು ಹೊರ ತೆಗೆದಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಆಂಬುಲೆನ್ಸ್ ಮೂಲಕ ಗದಗ ಜಿಲ್ಲೆಯ ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹಟ್ಟಿ ಹಾಗೂ ಹೈದರನಗರ ರಸ್ತೆ ಕಾಮಗಾರಿ ಮಾಡಲು ಸಂಪೂರ್ಣ ರಸ್ತೆಯನ್ನು ಅಗೆಯಲಾಗಿದೆ. ರಸ್ತೆಯ ಬದಿಯಲ್ಲಿ ಮಣ್ಣು ಹಾಕಲಾಗಿದೆ. ಬನ್ನ ಬಿಡಿಭಾಗ ತುಂಡಾಗಿ ಈ ಘಟನೆ ನಡೆದಿದೆ. ಅಧಿಕಾರಿಗಳು, ರಸ್ತೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಈ ರೀತಿಯ ಘಟನೆಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಬಸ್‌ನಲ್ಲಿ ಪಿಯುಸಿ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ಆ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರಾರಂಭವಾಗಿವೆ. ಬಸ್ ಪಲ್ಟಿಯಾದ ಸ್ಥಳಕ್ಕೆ ಪಿಎಸ್‌ಐ ಪ್ರಹ್ಲಾದ್ ನಾಯಕ ಭೇಟಿ ನೀಡಿದರು.

Leave a Reply

Your email address will not be published. Required fields are marked *

error: Content is protected !!