ಉದಯವಾಹಿನಿ, ಮೇಲುಕೋಟೆ: ವೈರಮುಡಿ ಬ್ರಹೋತ್ಸವಕ್ಕೆ ಪೂರ್ವಭಾವಿಯಾಗಿ ಇಲ್ಲಿನ ಪಂಚಕಲ್ಯಾಣಿಯಲ್ಲಿ ತೆಪ್ಪೋತ್ಸವ ಸೋಮವಾರ ರಾತ್ರಿ ಸಂಭ್ರಮದಿಂದ ನೆರವೇರಿತು.ಭವ್ಯವಾಗಿ ಅಲಂಕೃತವಾದ ಮಂಟಪದಲ್ಲಿ ನಡೆದ ಚೆಲುವನಾರಾಯಣಸ್ವಾಮಿಯ ಜಲವಿಹಾರದ ವೈಭವವನ್ನು ನೂರಾರು ಭಕ್ತರು ಕಣ್ಣುಂಬಿಕೊಂಡರು ಪಾಂಡವಪುರ ಖಜಾನೆಯಿಂದ ತಂದ ಮುತ್ತುಮುಡಿ, ಮುತ್ತುಗಳ ಹಾರಗಳೊಂದಿಗೆ ಚೆಲುವನಾರಾಯಣ ಸ್ವಾಮಿಯನ್ನು ಅಲಂಕರಿಸಿ ವೈಭವದ ಉತ್ಸವ ನೆರವೇರಿಸಲಾಯಿತು. ಮಹೂರ್ತ ಪಠಣದ ನಂತರ ತೆಪ್ಪ ಮಂಟಪದಲ್ಲಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರನ್ನು ಪ್ರತಿಷ್ಠಾಪಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಕಲ್ಯಾಣಿಯಲ್ಲಿ ಮೂರು ಪ್ರದಕ್ಷಿಣೆಯೊಂದಿಗೆ ಪ್ರಥಮ ತೆಪ್ಪೋತ್ಸವ ರಾತ್ರಿ 8ಕ್ಕೆ ಮುಕ್ತಾಯವಾಯಿತು. ಚೆಲುವನಾರಾಯಣಸ್ವಾಮಿ ವೈರಮುಡಿ ಜಾತ್ರಾ ಮಹೋತ್ಸವದ ಎಲ್ಲಾ ಉತ್ಸವ ಮತ್ತು ವಾಹನೋತ್ಸವಗಳಿಗೆ ವಿಶೇಷ ವಾದ್ಯ ತಂಡಗಳ ನಿಯೋಜನೆ ಮಾಡುವ ಸಂಬಂಧ ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ದಶಕಗಳ ಹಿಂದೆ ಆರಂಭಗೊಂಡ ವಿಶೇಷ ಮಂಗಳವಾದ್ಯ ಕೈಂಕರ್ಯ ನಾದೋಪಾಸನ ಸೇವೆ 10ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು ತಪ್ಪೋತ್ಸವದ ದಿವಸ ವಿದ್ಯಾನ್ ಆನಂದ್ ತಂಡ ನಾದಸ್ವರ ನುಡಿಸಿ ಉತ್ಸವಕ್ಕೆ ಮೆರಗು ನೀಡಿದರು.
ತೆಪ್ಪೋತ್ಸವದ ಅಂಗವಾಗಿ ಕಲ್ಯಾಣಿಯಲ್ಲಿ ಅಚ್ಚುಕಟ್ಟಾಗಿ ಶುಚಿತ್ವ ಕಾಪಾಡುವುದರ ಜೊತೆಗೆ ಸರಳ ದೀಪಾಲಂಕಾರ ಮಾಡಲಾಗಿತ್ತು.
