ಉದಯವಾಹಿನಿ, ತಿರುವನಂತಪುರ: ಐತಿಹಾಸಿಕ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಸುಮಾರು 100ಗ್ರಾಂನಷ್ಟು ಚಿನ್ನವನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ದೇವಾಲಯದಲ್ಲಿ ಚಿನ್ನದ ಲೇಪನ ಕೆಲಸಕ್ಕಾಗಿ ಇರಿಸಲಾಗಿದ್ದ 12 ಪವನ್ (ಸುಮಾರು 96 ಗ್ರಾಂ) ಚಿನ್ನ ಕಾಣೆಯಾಗಿರುವ ಬಗ್ಗೆ, ದೂರು ದಾಖಲಾಗಿದೆ. ಚಿನ್ನ ಕದ್ದವರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2 ದಿನಗಳ ಹಿಂದೆ ಕೊನೆಯ ಬಾರಿಗೆ ಚಿನ್ನದ ಲೇಪನ ಕೆಲಸವನ್ನು ಮಾಡಲಾಗಿತ್ತು. ನಂತರ ಉಳಿದ ಚಿನ್ನವನ್ನು ಲಾಕರ್ನಲ್ಲಿ ಭದ್ರಪಡಿಸಲಾಗಿತ್ತು. ಆದರೆ ಕೆಲಸಕ್ಕಾಗಿ ಮತ್ತೆ ಚಿನ್ನವನ್ನು ಲಾಕರ್ನಿಂದ ಹೊರತೆಗೆದಾಗ, ಸುಮಾರು 12 ಪವನ್ ಚಿನ್ನ ಕಾಣೆಯಾಗಿರುವುದು ಕಂಡುಬಂದಿದೆ. ಬಳಿಕ ದೇವಾಲಯದ ಅಧಿಕಾರಿಗಳು ದೂರು ದಾಖಲಿಸಿದ್ದಾರೆ ಎಂದು ಪೋರ್ಟ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
