ಉದಯವಾಹಿನಿ, ರಿಯಾದ್: ತಮ್ಮನ್ನು ಶಾಂತಿಸ್ಥಾಪಕ ಎಂದು ಕರೆದುಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ಶಮನಕ್ಕೆ ತಾನೇ ಕಾರಣ ಎಂದು ಹೇಳಿಕೊಂಡಿದ್ದು, ಉಭಯ ದೇಶಗಳು ಒಟ್ಟಿಗೆ ಊಟ ಮಾಡಬೇಕು ಎಂದು ಮತ್ತೊಂದು ಪುಕ್ಕಟೆ ಸಲಹೆ ಕೊಟ್ಟಿದ್ದಾರೆ.
ಅಣ್ವಸ್ತ್ರ ಶಕ್ತ ನೆರೆಯ ರಾಷ್ಟ್ರಗಳು ತಮ್ಮ ನಡುವಿನ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಭಾರತ ಹಾಗೂ ವಾಕಿಸ್ತಾನ ಭೋಜನಕೂಟ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ. ಅವರ ಈ ಹೇಳಿಕೆಗೆ ಭಾರತದಲ್ಲಿ ಭಾರಿ! ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿಂದೆ ಕಾಶ್ಮೀರದ ಮಧ್ಯಸ್ಥಿಕೆ ವಹಿಸುತ್ತೇನೆ ಎಂದಾಗ್ಯೂ ಭಾರತದ ರಾಜಕೀಯ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಸೌದಿ ಅರೇಬಿಯಾ ದೊರೆ ಮುಹಮ್ಮದ್ ಬಿನ್ ಸಲ್ಮನ್, ಟೆಸ್ಲಾ ಸಿಇಒ ಎಲಾನ್ ಮಸ್ಕ್, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತಿತರ ಗಣ್ಯರು ಪಾಲ್ಗೊಂಡಿದ್ದ ಅಮೆರಿಕ-ಸೌದಿ ಹೂಡಿಕೆ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲಕ್ಷಾಂತರ ಮಂದಿಯನ್ನು ಬಲಿ ಪಡೆಯುವ ಸಾಧ್ಯತೆ ಇದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾವ್ಯ ಅಣ್ವಸ್ಥ ಸಮರವನ್ನು ತಪ್ಪಿಸಲು ತಮ್ಮ ಆಡಳಿತ ಮಧ್ಯಸ್ಥಿಕೆ ವಹಿಸಿ ಶಾಂತಿ ಸ್ಥಾಪಿಸಲು ನೆರವಾಗಿದೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
ಅಮೆರಿಕ ನೇತೃತ್ವದ ಶಾಂತಿಸ್ಥಾಪನೆ ಮಾತುಕತೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ವಾಸ್ತವವಾಗಿ ಅಮೆರಿಕ ಜೊತೆ ಸಹಕರಿಸಿದೆ. ಅವರು ವಾಸ್ತವವಾಗಿ ಜೊತೆ ಸೇರಿದ್ದಾರೆ ಎನ್ನುವುದು ನನ್ನ ಭಾವನೆ. ಅವರು ಹೊರಬಂದು ಒಳ್ಳೆಯ ಭೋಜನಕೂಟ ನಡೆಸಿದರೆ ಅವರು ಇನ್ನಷ್ಟು ಹತ್ತಿರವಾಗಬಹುದು. ಅದು ಒಳ್ಳೆಯದಲ್ಲವೇ? ಎಂದು ಮಧ್ಯಪ್ರಾಚ್ಯ ದೇಶಗಳಿಗೆ ಮೂರು ದಿನಗಳ ಭೇಟಿ ನೀಡಿರುವ ಟ್ರಂಪ್ ಪ್ರಶ್ನಿಸಿದರು.
ಅಮೆರಿಕದ ಶಾಂತಿ ಮಾತುಕತೆಯಿಂದಾಗಿ ಹೊಸ ದಿಲ್ಲಿ ಹಾಗೂ ಇಸ್ಲಮಾಬಾದ್ ಜೊತೆಯಾಗುತ್ತಿದ್ದಾರೆ. ನನ್ನ ಪ್ರಕಾರ ಅವರು ಜೊತೆಯಾಗುತ್ತಿದ್ದಾರೆ. ಬಹುಷ ನಾವು ಇನ್ನಷ್ಟು ಅವರನ್ನು ಒಂದು ಮಾಡಬಹುದು. ಮಾರ್ಕೋ ಅವರು ಜೊತೆಗೆ ಹೊರಗೆ ಹೋಗಿ ಊಟ ಮಾಡಿದರೆ ಚೆನ್ನಾಗಿರುತ್ತೆ ಅಲ್ವಾ ಎಂದು ಟ್ರಂಪ್ ಹೇಳಿದ್ದಾರೆ.
