ಉದಯವಾಹಿನಿ, ಕಡೂರು: ಮರ ಕತ್ತರಿಸುವ ಸಮಯದಲ್ಲಿ ಮರದ ತುಂಡು ಮೈಮೇಲೆ ಬಿದ್ದು, ಕೊಂಬೆಗಳ ನಡುವೆ ಸಿಲುಕಿ ಪ್ರಾಣಾಪಾಯ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ತಾಲ್ಲೂಕಿನ ದೊಡ್ಡ ಪಟ್ಟಣಗೆರೆಯಲ್ಲಿ ಘಟನೆ ನಡೆದಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಹುಣಸೆ ಮರವನ್ನು ತೆರವುಗೊಳಿಸಲು ನಿರ್ಧರಿಸಲಾಗಿತ್ತು.ಕಡೂರಿನ ಸೈಯ್ಯದ್ ಎಂಬಾತ ಸುಮಾರು 35 ಅಡಿ ಎತ್ತರದ ಮರ ಏರಿ, ಕೊಂಬೆ ಕಡಿಯುತ್ತಿದ್ದ ವೇಳೆ ಎರಡು ಕೊಂಬೆಗಳ ನಡುವೆ ಸಿಲುಕಿಕೊಂಡರು. ಸುಮಾರು ಎರಡು ಗಂಟೆ ಮೇಲೆ ಬರಲಾಗದೆ ಮರದಲೇ ನರಳಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಸೈಯದ್ನನ್ನು ರಕ್ಷಿಸಿ ಸುರಕ್ಷಿತವಾಗಿ ಬುಟ್ಟಿಯ ಮೂಲಕ ಕೆಳಗಿಳಿಸಿದರು. ವ್ಯಕ್ತಿಯ ಬೆನ್ನಿನ ಭಾಗ ಮತ್ತು ಕಾಲಿಗೆ ಗಂಭೀರ ಪೆಟ್ಟಾಗಿದೆ. ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.
