ಉದಯವಾಹಿನಿ,ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 102 ನೇ ಆವೃತ್ತಿಯನ್ನು ಉದ್ದೇಶಿಸಿ ಇಂದು ಮಾತನಾಡಿದರು. ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ: ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನಿ ಮೋದಿ ಅವರು ಮುಂದಿನ ವಾರ ಅಮೆರಿಕ ಪ್ರವಾಸದಲ್ಲಿ ಇರುವುದಾಗಿ ಹೇಳಿದ್ದಾರೆ. ಅಮರಿಕೆಗೆ ತೆರಳುವ ಮುನ್ನ ಕೇಳುಗರನ್ನು ಉದ್ದೇಶಿಸಿ ಆ ಕ್ಷಣದ ಮಹತ್ವವನ್ನು ವ್ಯಕ್ತಪಡಿಸಿದರು. ಬಿಪೊರ್ಜಾಯ್ ಚಂಡಮಾರುತದ ವಿನಾಶಕಾರಿ ಪರಿಣಾಮವನ್ನು ಪ್ರಸ್ತಾಪಿಸುತ್ತಾ ಚಂಡಮಾರುತ ಎದುರಿಸಲು ಸಿದ್ಧತೆ ಮತ್ತು ನಿರ್ವಹಣೆಯಲ್ಲಿ ಅಧಿಕಾರಿಗಳ ಪ್ರಯತ್ನವನ್ನು ಶ್ಲಾಘಿಸಿದರು.
ಚಂಡಮಾರುತದಿಂದ ಉಂಟಾದ ವಿನಾಶದಿಂದ ಕಚ್ ಜನರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ನಡೆದು 350 ವರ್ಷಗಳು ಪೂರ್ಣಗೊಂಡಿವೆ ಎನ್ನುತ್ತಾ ಶಿವಾಜಿ ಮಹಾರಾಜರ ನಿರ್ವಹಣಾ ಕೌಶಲ್ಯಗಳನ್ನು ಎತ್ತಿ ಹಿಡಿದರು. ನೀರು ನಿರ್ವಹಣೆ ಮತ್ತು ನೌಕಾಪಡೆ ಸೇರಿದಂತೆ ಅವರ ಆಡಳಿತದಿಂದ ಕಲಿಯಬೇಕಾದ ಪಾಠಗಳನ್ನು ಒತ್ತಿ ಹೇಳಿದರು. 1975 ರಲ್ಲಿ ಹೇರಲಾದ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಭಾರತೀಯ ಪ್ರಜಾಪ್ರಭುತ್ವದ ಕಪ್ಪು ಅಧ್ಯಾಯ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ಆ ಸಮಯದಲ್ಲಿ ನಡೆದ ಪ್ರತಿಭಟನೆಗಳನ್ನು ಸ್ಮರಿಸಿದ್ದಾರೆ. ಮುಂದಿನ ಪೀಳಿಗೆಗೆ ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ಅರಿವು ಮೂಡಿಸಲು ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಪ್ರಸ್ತುತತೆ ಬಗ್ಗೆ ಉಲ್ಲೇಖಿಸಿದರು.
