ಉದಯವಾಹಿನಿ, ಪಾಟ್ನಾ: ಬಿಹಾರ ಚುನಾವಣೆಗೆ ಸಿಎಂ ನಿತೀಶ್ ಕುಮಾರ್ ಸಜ್ಜಾಗಿದ್ದಾರೆ. ಬಿಹಾರ ಮಹಿಳೆಯರಿಗೆ ಉದ್ಯೋಗದಲ್ಲಿ 35% ಮೀಸಲಾತಿ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಈ ಮೀಸಲಾತಿ ಕಲ್ಪಿಸಲಾಗುವುದು. ಎಲ್ಲಾ ವರ್ಗದ ಮಹಿಳೆಯರಿಗೂ ಸೌಲಭ್ಯ ಸಿಗಲಿದೆ. ಆದರೆ, ಅವರು ಬಿಹಾರದ ಖಾಯಂ ನಿವಾಸಿಗಳಾಗಿರಬೇಕು ಎಂದು ಎಕ್ಸ್ ಖಾತೆಯಲ್ಲಿ ಸಿಎಂ ಸ್ಪಷ್ಟಪಡಿಸಿದ್ದಾರೆ.
ಆಡಳಿತದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಪಾಟ್ನಾದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಈ ಘೋಷಣೆ ಹೊರಬಿದ್ದಿದೆ. ಮೀಸಲಾತಿಯ ಜೊತೆಗೆ, ಬಿಹಾರ ಸರ್ಕಾರವು ರಾಜ್ಯದ ಯುವಜನರ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ಬಿಹಾರ ಯುವ ಆಯೋಗ ಎಂಬ ಹೊಸ ಶಾಸನಬದ್ಧ ಸಂಸ್ಥೆಯ ರಚನೆಗೆ ಅನುಮೋದನೆ ನೀಡಿತು. ಬಿಹಾರದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು, ಅವರಿಗೆ ತರಬೇತಿ ನೀಡಲು ಮತ್ತು ಅವರನ್ನು ಸಬಲೀಕರಣಗೊಳಿಸಲು, ಸಮರ್ಥರನ್ನಾಗಿ ಮಾಡಲು, ಸರ್ಕಾರ ಬಿಹಾರ ಯುವ ಆಯೋಗವನ್ನು ರಚಿಸಲು ನಿರ್ಧರಿಸಿದೆ. ಇಂದು ಇದಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.
