ಉದಯವಾಹಿನಿ, ಬೆಂಗಳೂರು: ಪ್ರಯಾಣಿಕರ ಬಳಿ ಮನಸೋ ಇಚ್ಛೆ ಸುಲಿಗೆ ಮಾಡುತ್ತಿದ್ದ ಆಟೋ ಚಾಲಕರ ವಿರುದ್ಧ ಸಮರ ಸಾರಿದ್ದ ಆರ್ಟಿಓ ಕಳೆದೊಂದು ವಾರದಲ್ಲೇ ಸಾವಿರಕ್ಕೂ ಹೆಚ್ಚು ಆಟೋಗಳಿಗೆ ಶಾಕ್ ನೀಡಿದೆ. ಬೆಂಗಳೂರು ನಗರದಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್ ಬೆನ್ನಲ್ಲೇ ಆಟೋ ಚಾಲಕರು ಪ್ರಯಾಣಿಕರ ಬಳಿ ದುಪ್ಪಟ್ಟು ದರ ವಸೂಲಿಗೆ ಮುಂದಾಗಿದ್ದಾರೆ ಅನ್ನೋ ಆರೋಪಗಳು, ದೂರುಗಳು ಹೆಚ್ಚಾಗಿದ್ದ ಕಾರಣ, ಕಳೆದ ಒಂದು ವಾರದಿಂದ ಆರ್ಟಿಓ, ಆಟೋ ಚಾಲಕರ ವಿರುದ್ಧ ಸಮರ ಸಾರಿತ್ತು. ಅದರಂತೆ ತಂಡಗಳ ರಚನೆ ಮಾಡಿ ವಲಯ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸಿತ್ತು. ಕಾರ್ಯಚರಣೆ ಭರ್ಜರಿ ಯಶಸ್ಸು ಸಾಧಿಸಿದ್ದು, ಒಂದೇ ವಾರದಲ್ಲಿ ಸಾವಿರಕ್ಕೂ ಹೆಚ್ಚು ಆಟೋಗಳ ವಿರುದ್ಧ ಕ್ರಮಕೈಗೊಂಡಿದೆ.
ಕಳೆದ ಒಂದು ವಾರದಿಂದ ನಗರದ 11 ಆರ್ಟಿಓ ಕಚೇರಿ ವ್ಯಾಪ್ತಿಯಲ್ಲಿ 20 ತಂಡಗಳನ್ನ ರಚಿಸಿ ಸಾರಿಗೆ ಅಧಿಕಾರಿಗಳು ನಗರದಾದ್ಯಂತ ಕಾರ್ಯಚರಣೆ ಕೈಗೊಂಡಿದ್ದಾರೆ. ಈ ವೇಳೆ ಒಟ್ಟು 3,531 ಆಟೋಗಳನ್ನ ತಪಾಸಣೆ ನಡೆಸಿದ್ದು, ಅದರಲ್ಲಿ ಪರ್ಮೀಟ್, ದುಪ್ಪಟ್ಟು ದರ ವಸೂಲಿ ಇನ್ಶೂರೆನ್ಸ್, ಡಾಕ್ಯುಮೆಂಟ್ಗಳಿಲ್ಲದ 1,006 ವಾಹನಗಳ ವಿರುದ್ಧ ಕೇಸ್ ದಾಖಲಿಸಿ, 233 ಆಟೋಗಳನ್ನ ಸೀಜ್ ಮಾಡಿದ್ದಾರೆ.
