ಉದಯವಾಹಿನಿ, ನವದೆಹಲಿ: ’75 ವರ್ಷ ತುಂಬಿದ ಮೇಲೆ ಯಾರೇ ಆದರೂ ನಿವೃತ್ತರಾಗಬೇಕು ಹಾಗೂ ಕೆಲಸ ಮಾಡಲು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಉಲ್ಲೇಖಿಸುವ ಮೂಲಕ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಕುಟುಕಿದೆ.’ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಸಂದರ್ಭದಲ್ಲಿಯೇ, ಮೋದಿ ಅವರಿಗೆ 75 ವರ್ಷ ತುಂಬಲಿರುವ ಕುರಿತು ಮೋಹನ್ ಭಾಗವತ್ ನೆನಪಿಸಿದ್ದಾರೆ. ಇದು ಎಂಥ ‘ಘರ್ ವಾಪ್ಪಿ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
‘ಭಾಗವತ್ ಅವರ ಈ ಹೇಳಿಕೆ ಒಳ್ಳೆಯ ಸುದ್ದಿಯೇ ಆಗಿದೆ. ಭಾಗವತ್ ಮತ್ತು ಮೋದಿ ಅವರಿಗೆ ಈ ವರ್ಷ 75 ವರ್ಷ ತುಂಬಲಿದೆ. ಹೀಗಾಗಿ, ಇದು ದೇಶ ಹಾಗೂ ಸಂವಿಧಾನಕ್ಕೆ ಒಳ್ಳೆಯ ದಿನಗಳೇ’ ಎಂದು ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.
ನಾಗುರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾಗವತ್, ಆರ್‌ಎಸ್‌ಎಸ್‌ನ ಹಿರಿಯ ನಾಯಕರಾಗಿದ್ದ ಮೋರೋಪಂತ ಪಿಂಗ್ಲೆ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು.
‘ನಿಮಗೆ 75 ವರ್ಷ ತುಂಬಿದಾಗ ಶಾಲು ಹೊದಿಸಿ ಸನ್ಮಾನಿಸಿದರೆ, ನಿಮಗೆ ವಯಸ್ಸಾಯಿತು. ಅಧಿಕಾರದಿಂದ ಕೆಳಗಿಳಿದು, ಬೇರೆಯವರಿಗೆ ಜವಾಬ್ದಾರಿ ವಹಿಸಬೇಕು ಎಂಬುದಾಗಿ ಪಿಂಗ್ಲೆ ಹೇಳಿದ್ದರು’ ಎಂದು ಭಾಗವತ್ ಪ್ರಸ್ತಾಪಿಸಿದ್ದರು.

Leave a Reply

Your email address will not be published. Required fields are marked *

error: Content is protected !!