ಉದಯವಾಹಿನಿ, ಬೆಂಗಳೂರು : ಬೆಂಗಳೂರು ಸುರಂಗ ರಸ್ತೆ ಯೋಜನೆಯಿಂದ ಸಾವಿರಾರು ಕೋಟಿ ದುಡ್ಡು ಹೊಡೆಯುವ ಸಂಚಿದೆ. ಇದು ಶ್ರೀಮಂತರಿಗೆ ಶ್ರೀಮಂತರಿಗಾಗಿ ಶ್ರೀಮಂತರಿಗೋಸ್ಕರ ಇರುವ ಟನೆಲ್ ಯೋಜನೆ ಎಂದು ಸಂಸದ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಬೆಂಗಳೂರಿನಲ್ಲಿ ಟನೆಲ್ ಯೋಜನೆ ಮಾಡಲು ಹೊರಟಿದೆ. ಹೆಬ್ಬಾಳದಿಂದ ಡೈರಿ ಸರ್ಕಲ್​ವರೆಗಿನ ಟನೆಲ್ ಯೋಜನೆ ಇದಾಗಿದೆ. ಟನೆಲ್ ಯೋಜನೆ ಬೆಂಗಳೂರಿಗೆ ಮಾರಕ. ಈ ಯೋಜನೆಯಲ್ಲಿ ಆರಂಭದಲ್ಲೇ ಸಾಕಷ್ಟು ಭ್ರಷ್ಟಾಚಾರ ನಡೀತಿದೆ. ಇದರ ಫೀಸಿಬಿಲ್ ರಿಪೋರ್ಟ್ ನಲ್ಲೂ ಅಕ್ರಮ ಆಗಿದೆ. ಇದು ಕಾರುಗಳಿಗೆ ಮಾತ್ರ ಓಡಾಡಲು ಮಾಡ್ತಿರುವ ಯೋಜನೆ. ಕಾರುಗಳಿರುವವರಿಗೆ ಮಾತ್ರ ಈ ಯೋಜನೆ ಅನುಕೂಲ ಎಂದು ಆರೋಪಿಸಿದರು. ಡಿಸಿಎಂ ಅವರು ಟನೆಲ್ ಯೋಜನೆಗೆ ಟೋಲ್ ಹಾಕೋದಾಗಿ ಹೇಳಿದ್ದಾರೆ. 650 ರೂ. ಟೋಲ್ ಅನ್ನು ಹಾಕುವ ಬಗ್ಗೆ ಡಿಪಿಆರ್ ವರದಿಯಲ್ಲಿ ಹೇಳಲಾಗಿದೆ. ಕೋಟ್ಯಧಿಪತಿಗಳು ಮಾತ್ರ ಇಷ್ಟು ಟೋಲ್ ಕಟ್ಟಿ ಓಡಾಡಬೇಕು ಅಷ್ಟೇ‌. ಡಿಕೆಶಿ ಅವರ ಅಕ್ಕಪಕ್ಕ ಇರೋರಷ್ಟೇ, ಸಂಬಂಧಿಕರಷ್ಟೇ ಈ ಯೋಜನೆಯಿಂದ ಓಡಾಡಲು ಸಹಕಾರಿ ಆಗುತ್ತದೆ. ಬೆಂಗಳೂರಿನ ಶೇ 10ಕ್ಕಿಂತಲೂ ಕಡಿಮೆ ಜನರ ಬಳಿ ಮಾತ್ರ ಕಾರುಗಳಿವೆ. ಶೇ 90ರಷ್ಟು ಜನರಿಗೆ ಟನೆಲ್ ಯೋಜನೆ ಅನುಕೂಲ ಆಗೋದಿಲ್ಲ ಎಂದು ಕಿಡಿಕಾರಿದರು.
ಟನೆಲ್ ಯೋಜನೆಗೆ ವೆಚ್ಚವೂ ಅತೀ ಹೆಚ್ಚು. ಟನೆಲ್ ಯೋಜನೆ ಸಾಮಾನ್ಯ ಜನರಿಗೆ ಉಪಯೋಗ ಆಗೋದಿಲ್ಲ. ಜನರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡಲಾಗ್ತಿದೆ. ಕಾರು ಇಲ್ಲಾಂದ್ರೆ ಟನೆಲ್ ರೋಡ್​​​ಗೆ ನೀವು ಹೋಗಲು ಆಗಲ್ಲ. ಇದು ಆರ್ಥಿಕ ಅಸ್ಪೃಶ್ಯತೆ. ಶ್ರೀಮಂತರಿಗೆ, ಶ್ರೀಮಂತರಿಗಾಗಿ, ಶ್ರೀಮಂತರಿಗೋಸ್ಕರ ಇರುವ ಯೋಜನೆ ಟನೆಲ್ ಯೋಜನೆ. ಟನೆಲ್ ಯೋಜನೆಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡ್ತಿದ್ದಾರೆ. ಮಧ್ಯಪ್ರದೇಶ ಸರ್ಕಾರ ಡಿಬಾರ್ ಮಾಡಿರುವ ಲಯನ್ ಗ್ರೂಪ್‌ ನಸಿನರ್ಜಿ ಸಂಸ್ಥೆಗೆ ಟನೆಲ್ ರಸ್ತೆ ಯೋಜನೆಯ ಫೀಸಿಬಲ್ ರಿಪೋರ್ಟ್ ಮಾಡಲು ಟೆಂಡರ್ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

error: Content is protected !!