ಉದಯವಾಹಿನಿ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳ ಭಾರತ ತಂಡಕ್ಕೆ ಗಾಯಾಳು ವಾಷಿಂಗ್ಟನ್ ಸುಂದರ್ ಅವರ ಸ್ಥಾನಕ್ಕೆ ದೆಹಲಿ ತಂಡದ ಆಯುಷ್ ಬದೋನಿ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಇದನ್ನು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಿರವಾಗಿ ರನ್ ಗಳಿಸಿದ ಬ್ಯಾಟ್ಸ್ಮನ್ಗಳನ್ನು ಬಿಟ್ಟು ದೆಹಲಿ ಆಟಗಾರನಿಗೆ ಅವಕಾಶ ನೀಡಿದ ಬಿಸಿಸಿಐ ಆಯ್ಕೆದಾರರ ನಿರ್ಧಾರವನ್ನು ಮಾಜಿ ಕ್ರಿಕೆಟಿಗ ಕೆ ಶ್ರೀಕಾಂತ್ ಪ್ರಶ್ನೆ ಮಾಡಿದ್ದಾರೆ.
ಆಯುಷ್ ಬದೋನಿ ಅವರನ್ನು ಆಯ್ಕೆ ಮಾಡುವುದರ ಹಿಂದಿನ ತರ್ಕವನ್ನು ಪ್ರಶ್ನಿಸಿದ ಶ್ರೀಕಾಂತ್, ಬಧೋನಿ ಅವರ ಇತ್ತೀಚಿನ ದೇಶಿ ಫಾರ್ಮ್ ಏಕದಿನ ತಂಡಕ್ಕೆ ಅರ್ಹತೆ ಪಡೆಯಲು ಸಮರ್ಥನೀಯವಲ್ಲ ಎಂದು ವಾದಿಸಿದರು. ವಿಜಯ್ ಹಝಾರೆ ಟ್ರೋಫಿಯಲ್ಲಿ ಅವರ ಪ್ರದರ್ಶನವನ್ನು ಉಲ್ಲೇಖಿಸಿ, “ಈ ರೀತಿಯ ಪ್ರದರ್ಶನದೊಂದಿಗೆ, ಅವರಿಗೆ ಆಯ್ಕೆಯಾಗುವ ಯಾವುದೇ ಅವಕಾಶವಿರಲಿಲ್ಲ,” ಎಂದು ಆಯ್ಕೆಯ ಮಾನದಂಡವು ಅಸಮಂಜಸವಾಗಿ ಕಂಡುಬಂದಿದೆ ಎಂದಿದ್ದಾರೆ.
ಆಯ್ಕೆದಾರರು ಬಳಸುವ ಮಾನದಂಡಗಳಲ್ಲಿ ಸ್ಪಷ್ಟತೆಯ ಕೊರತೆ ಇದೆ ಎಂದು ಶ್ರೀಕಾಂತ್ ಹೇಳಿದ್ದಾರೆ. “ಕೆಲವರಿಗೆ ರನ್ ಗಳಿಸಲು ಹೇಳಲಾಗುತ್ತದೆ. ಆದರೆ ಕೆಲವರಿಗೆ, ನೀವು ಏನನ್ನೂ ಮಾಡದಿದ್ದರೂ ಸಹ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ,” ಎಂದು ಅವರು ಹೇಳಿದರು. ಅಂತಹ ಆಯ್ಕೆಗಳು ದೇಶಿ ಆಟಗಾರರಿಗೆ ಕಳುಹಿಸುವ ಸಂದೇಶದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆಯುಷ್ ಬದೋನಿ ಅವರ ಐಪಿಎಲ್ ಅಂಕಿಅಂಶಗಳನ್ನು ಇದೇ ವೇಳೆ ಕೆ ಶ್ರೀಕಾಂತ್ ಪ್ರಶ್ನೆ ಮಾಡಿದ್ದಾರೆ. “ಅವರ ಯಾವುದಾದರೊಂದು ಪರಿಣಾಮಕಾರಿ ಇನಿಂಗ್ಸ್ವೊಂದನ್ನು ನನಗೆ ನೆನಪಿಸಿ?, ಐಪಿಎಲ್ ಟೂರ್ನಿಯ 20 ಓವರ್ಗಳಲ್ಲಿ ಅವರಿಂದ ರನ್ ಗಳಿಸಲು ಸಾಧ್ಯವಾಗಿಲ್ಲವಾದರೆ, 50 ಓವರ್ಗಳ ಸ್ವರೂಪದಲ್ಲಿ ಗಳಿಸಲು ಆಗುತ್ತಾ?” ಎಂದು ಹೇಳುವ ಮೂಲಕ ಕೆ ಶ್ರೀಕಾಂತ್ ಬಿಸಿಸಿಐ ಆಯ್ಕೆದಾರರನ್ನು ಪ್ರಶ್ನೆ ಮಾಡಿದ್ದಾರೆ.
