ಉದಯವಾಹಿನಿ, ವಿಜಯಪುರ: ಬಿಜೆಪಿಯಿಂದ ಉಚ್ಚಾಟನೆ ಆಗಿದ್ದೀನಿ, ಹಾಗೇ ನೋಡಿದ್ರೆ 18 ವರ್ಷ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು, ಆದರೆ ನೋಡಿ 2 ತಿಂಗಳಲ್ಲಿ ಮತ್ತೆ ಮರಳಿ ಬಿಜೆಪಿಗೆ ಸೇರಿಸಿಕೊಳ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಚಾಟನೆ ಆಗಿರೋದು ನಾನು. ಹಾಗೇ ನೋಡಿದ್ರೆ 18 ವರ್ಷ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು. ಆದ್ರೆ ನೋಡಿ 2 ತಿಂಗಳಲ್ಲಿ ಮತ್ತೆ ಮರಳಿ ನನ್ನನ್ನ ಸೇರಿಸಿಕೊಳ್ತಾರೆ. ಏನು ಮಾಡೋದು? ನಮ್ಮ ಶಕ್ತಿ ಇದ್ದರೆ ಎಲ್ಲರೂ ಕರೆಯುತ್ತಾರೆ. ಇಲ್ಲ ಅಂದ್ರೆ ಅಪ್ಪಾಜಿ ಎನ್ನುತ್ತ ಯಡ್ಡಿಯೂರಪ್ಪ, ವಿಜಯೇಂದ್ರ ಕೈ, ಕಾಲು ಹಿಡಿಯಬೇಕಾಗುತ್ತೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಕೂಡಲಸಂಗಮಶ್ರೀ ವಿರುದ್ಧ ಹತ್ಯೆಗೆ ಸಂಚು ರೂಪಿಸಿದ ವಿಚಾರವಾಗಿ ಮಾತನಾಡಿದ ಅವರು, ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ನನಗೆ ಯಾವ ಮಾಹಿತಿ ಇಲ್ಲ. ಅದರ ಬಗ್ಗೆ ಬೆಲ್ಲದ್ ಅವರನ್ನೇ ಕೇಳಿ. ನಾವು ಜಯಮೃತ್ಯುಂಜಯ ಸ್ವಾಮೀಜಿಗಳಿಗಾಗಿ 15 ಎಕರೆ ಜಮೀನು ತೆಗೆದುಕೊಂಡು ಹಾಸ್ಟೇಲ್ ಸಮೇತ ಮಠದ ವ್ಯವಸ್ಥೆ ಮಾಡುತ್ತೇವೆ. ಅದರ ಬಗ್ಗೆ ಬುಧವಾರ ನಾನು, ಸಿಸಿ ಪಾಟೀಲ್ ಸೇರಿದಂತೆ ಅನೇಕರು ಸೇರಿ ಸಭೆ ಮಾಡುತ್ತೇವೆ. ಶ್ರೀಗಳು ಅಲ್ಲಿಯೇ ಇರಲಿದ್ದಾರೆ. ಈ ಬಾರಿ ಯಾವುದೇ ರಾಜಕಾರಣಿ ಕೂಡ ಟ್ರಸ್ಟ್ನಲ್ಲಿ ಇರುವುದಿಲ್ಲ. ಕೇವಲ ಭಕ್ತರು ಮಾತ್ರ ಟ್ರಸ್ಟ್ನಲ್ಲಿ ಇರುತ್ತಾರೆ ಎಂದರು. ಉಚ್ಚಾಟನೆ ಮಾಡಲು ಕಾಶಪ್ಪನವರ್ ಯಾರು? ಇದೇನು ರಾಜಕೀಯ ಪಕ್ಷನಾ? ಸ್ವಾಮೀಜಿಗಳ ಜೊತೆ ಭಕ್ತರಿದ್ದಾರೆ. ಯಾವಾಗಲೂ ದೀಪ ಆರುವ ಮುನ್ನ ಜೋರಾಗಿ ಉರಿಯುತ್ತೆ, ಅದಕ್ಕೆ ಕಾಶಪ್ಪನವರ್ ಉರಿಯುತ್ತಿದ್ದಾನೆ. ಇಡೀ ಸಮಾಜ ಸ್ವಾಮೀಜಿಗಳ ಜೊತೆಯಲ್ಲಿದೆ. ಆ ಟ್ರಸ್ಟ್ನಲ್ಲಿ ಅವರ ಹೆಸರು ಇಲ್ಲ ಎಂದ್ಮೇಲೆ ಅದರ ಮೇಲೆ ಆಸೆಯೂ ಕೂಡ ಇರಬಾರದು. ನಾವು ಆಸೆ ಬಿಟ್ಟು ಬಿಡಿ ಎಂದು ಹೇಳಿದ್ದೇವೆ. ಗದಗನ ಪ್ರಭಣ್ಣಾ ಹುಣಶಿಕಟ್ಟಿ, ಧಾರವಾಡದ ಅಸೂಟಿ ಎರಡು ಕುಟುಂಬದವರು ಸಮಾಜದ ಆಸ್ತಿಯನ್ನು ಖಾಸಗಿ ಟ್ರಸ್ಟ್ ಮಾಡಿಕೊಂಡಿದ್ದಾರೆ. ಅವರ ಮಕ್ಕಳು, ಮೊಮ್ಮಕಳೇ ಅದರ ಟ್ರಸ್ಟ್ನ ಸದಸ್ಯರಾಗಿರುತ್ತಾರೆ.
