ಉದಯವಾಹಿನಿ, ನವದೆಹಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದ್ದ ನಟ ದರ್ಶನ್‌ ಜಾಮೀನು ಸಂಬಂಧಿತ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ಮತ್ತೆ ಮುಂದೂಡಿದೆ. ದರ್ಶನ್ ಪರ ವಕಾಲತು ವಹಿಸಬೇಕಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಇಂದು ತಮ್ಮ ವಾದವನ್ನು ಮಂಡಿಸಬೇಕಿತ್ತು. ಹೀಗಾಗಿ ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಲಾಗಿದೆ.ದರ್ಶನ್ ಪರ ವಕೀಲ ಸಿದ್ಧಾರ್ಥ ದವೆ ಹಾಜರಾಗಿದ್ದರು. ಕಪಿಲ್ ಸಿಬಲ್ ಅವರು ಗೈರಾಗಿದ್ದರಿಂದ, ಕೇಸ್ ಬಗ್ಗೆ ಅಧ್ಯಯನ ಮಾಡಲು ಸ್ವಲ್ಪ ಕಾಲಾವಕಾಶವನ್ನು ಸಿದ್ಧಾರ್ಥ ದವೆ ಕೇಳಿದ್ದಾರೆ. ಕಪಿಲ್ ಸಿಬಲ್ ಇಂದು ವಾದ ಮಂಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಿನ್ನೆ ರಾತ್ರಿ ಈ ಕೇಸ್ ನನಗೆ ಬಂದಿದೆ. ಬೇರೊಂದು ಕೋರ್ಟ್‌ನಲ್ಲಿ ಕಪಿಲ್ ಸಿಬಲ್ ಬ್ಯುಸಿಯಾಗಿದ್ದಾರೆ. ಒಂದು ದಿನ ಕಾಲಾವಕಾಶ ನೀಡುವಂತೆ ದರ್ಶನ್ ಪರ ಹೊಸ ವಕೀಲ ಸಿದ್ಧಾರ್ಥ ದವೆ ಮನವಿ ಮಾಡಿದರು. ಹಾಗಾಗಿ ಸುಪ್ರೀಂ ಕೋರ್ಟ್ ಜಡ್ಜ್ ಈ ಅರ್ಜಿಯ ವಿಚಾರಣೆಯನ್ನು ಜುಲೈ 24ಕ್ಕೆ ಮಂದೂಡಿ ಆದೇಶ ಹೊರಡಿಸಿದರು.
ನಟ ದರ್ಶನ್ ಮತ್ತು ಗ್ಯಾಂಗ್‌ನಿಂದ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ಡಿಸೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಜುಲೈ 24ಕ್ಕೆ ವಿಚಾರಣೆ ಮುಂದೂಡಿದರು. ಇದಕ್ಕೂ ಮುನ್ನ ಸರ್ಕಾರದ ಪರ ವಕೀಲರು ತಮ್ಮ ವಾದವನ್ನು ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!