ಉದಯವಾಹಿನಿ, ನವದೆಹಲಿ: ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಬ್ರಿಟಿಷ್ ಸಂತ್ರಸ್ತರಿಗೆ ಬದಲಿ ಮೃತದೇಹವನ್ನು ಹಸ್ತಾಂತರಿಸಲಾಗಿದೆ ಎಂಬ ಬ್ರಿಟಿಷ್ ಮಾಧ್ಯಮಗಳ ವರದಿಯನ್ನು ಭಾರತ ತಳ್ಳಿ ಹಾಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಂದೀಪ್ ಜೈಸ್ವಾಲ್, ಎಲ್ಲ ಮೃತದೇಹಗಳನ್ನು ಅತ್ಯಂತ ವೃತ್ತಿಪರತೆಯಿಂದ ಪತ್ತೆ ಹಚ್ಚಿ, ಘನತೆ ಹಾಗು ಗೌರವದೊಂದಿಗೆ ಅವರ ಕುಟುಂಬಗಳಿಗೆ ತಲುಪಿಸಲಾಗಿದೆ. ಈ ನಡುವೆ ಬದಲಿ ಮೃತದೇಹಗಳನ್ನು ಯುಕೆಯ ಎರಡು ಕುಟುಂಬಗಳು ಪಡೆದಿವೆ ಎಂಬ ಕೆಲವು ವರದಿಗಳನ್ನು ಗಮನಿಸಿದ್ದು, ಯುಕೆಯೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ವಿಮಾನ ದುರಂತದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಅಪಘಾತದಲ್ಲಿ ಸಾವನ್ನಪ್ಪಿದ ಸಂತ್ರಸ್ತರ ಪತ್ತೆಗೆ ಮುಂದಾದರು. ಇದಕ್ಕಾಗಿ ಶಿಷ್ಟಾಚಾರ ಮತ್ತು ತಾಂತ್ರಿಕ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಜೂನ್ 12ರಂದು ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 241 ಮಂದಿ ಭಾರತೀಯರು, 53 ಮಂದಿ ಬ್ರಿಟಿಷ್ ಪ್ರಜೆಗಳು ಸಾವನ್ನಪ್ಪಿದ್ದರು. ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆಗೆ ಕುಟುಂಬ ಸದಸ್ಯರ ಡಿಎನ್ಎ ಮಾದರಿ ಸಂಗ್ರಹಿಸಲಾಗಿತ್ತು.
