ಉದಯವಾಹಿನಿ, ಬೆಂಗಳೂರು: ಆನ್‌ಲೈನ್‌ ವಂಚನೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಬ್ಯಾಂಕ್‌ ಅಧಿಕಾರಿಗಳೇ ಇತ್ತೀಚೆಗೆ ಸೈಬರ್‌ ಕ್ರೈಂ ಜಾಲಕ್ಕೆ ಒಳಗಾಗುತ್ತಿದ್ದಾರೆ. ಬ್ಯಾಂಕ್‌ವೊಂದರ ರೀಜನಲ್‌ ಮ್ಯಾನೇಜರ್‌ ಈ ಜಾಲಕ್ಕೆ ಸಿಲುಕಿ 50 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.ಮಂಡ್ಯ ಜಿಲ್ಲೆಯ ಬ್ಯಾಂಕ್‌ನ ರೀಜನಲ್‌ ಮ್ಯಾನೇಜರ್‌ಗೆ ಸೈಬರ್‌ ವಂಚಕ ಕರೆ ಮಾಡಿ ನಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು ನಿಮ ಅಕೌಂಟ್‌ಗೆ ಮನಿ ಲ್ಯಾಂಡ್ರಿಂಗ್‌, ಹವಾಲ ದಂಧೆ ಮೂಲಕ ಲಕ್ಷಾಂತರ ರೂ. ಹಣ ಬಂದಿದೆ ಎಂದು ಹೆದರಿಸಿದ್ದಾನೆ. ನಂತರ ಡಿಜಿಟಲ್‌ ಅರೆಸ್ಟ್‌ ಎಂದು ನಕಲಿ ವಾರೆಂಟ್‌ ಕಳುಹಿಸಿದ ಸೈಬರ್‌ ವಂಚಕ ಬ್ಯಾಂಕ್‌ ಮ್ಯಾನೇಜರ್‌ ಅಕೌಂಟ್‌ನಲ್ಲಿದ್ದ 50.75 ಲಕ್ಷ ರೂ. ಹಣವನ್ನು ಪಡೆದು ವಂಚಿಸಿದ್ದಾನೆ. ಈ ಬಗ್ಗೆ ಅನುಮಾನಗೊಂಡ ರೀಜನಲ್‌ ಮ್ಯಾನೇಜರ್‌ ತಕ್ಷಣ ಮಂಡ್ಯ ಸಿಇಎನ್‌ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ವಂಚಕರಿಗೆ ಹಣ ಸಂದಾಯವಾದ ಬ್ಯಾಂಕ್‌ ಖಾತೆಗಳು ನಕಲಿ ಎಂಬುವುದು ಗೊತ್ತಾಗಿದೆ. ತಾಂತ್ರಿಕ ಸಾಕ್ಷಾಧಾರಗಳಿಂದ ತನಿಖೆ ಮುಂದುವರೆಸಿದ ಪೊಲೀಸರು ಈ ವಂಚನೆಯ ಜಾಲ ರಾಜಸ್ಥಾನದಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ. ಒಂದು ತಂಡ ರಾಜಸ್ಥಾನಕ್ಕೆ ತೆರಳಿ ಮಾಹಿತಿಗಳನ್ನು ಕಲೆಹಾಕಿದಾಗ ದೆಹಲಿಯಲ್ಲಿ ಜಾಲ ಇದೆ ಎಂಬುವುದು ತಿಳಿದು, ತಕ್ಷಣ ಈ ತಂಡ ದೆಹಲಿಗೆ ತೆರಳಿ ಹಲವು ಆಯಾಮಗಳಲ್ಲಿ ಮಾಹಿತಿಗಳನ್ನು ಸಂಗ್ರಹಿಸಿ, ಮೂವರು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ರಾಜಸ್ಥಾನ ಮೂಲದ ಗೋಪಾಲ್‌ ಬಿಷ್ಣೋಯಿ, ಮಹಿಪಾಲ್‌ ಬಿಷ್ಣೋಯಿ, ಜಿತೇಂದ್ರ ಸಿಂಗ್‌ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ರೀಜನಲ್‌ ಮ್ಯಾನೇಜರ್‌ ನಿಂದ ಪಡೆದ ಹಣವನ್ನು 29 ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ.ಈ ವಂಚಕರಿಂದ 1.50 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದು, ಉಳಿದ ಹಣ ವಶಕ್ಕೆ ಪಡೆಯಲು ಪೊಲೀಸರು ವಂಚಕರು ಹಣ ವರ್ಗಾವಣೆ ಮಾಡಿದ ಖಾತೆಗಳನ್ನು ಪರಿಶೀಲಿಸುತ್ತಿದ್ದಾರೆ.ಈ ಪ್ರಕರಣದಲ್ಲಿ ಇನ್ನಿಬ್ಬರು ಭಾಗಿಯಾಗಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಕಾರ್ಯ ಮುಂದುವರೆದಿದೆ.

Leave a Reply

Your email address will not be published. Required fields are marked *

error: Content is protected !!