ಉದಯವಾಹಿನಿ, ಶತ ಚಿತ್ರಗಳ ಸರದಾರ ಓಂ ಸಾಯಿಪ್ರಕಾಶ್ ಅವರ ನಿರ್ದೇಶನ ಹಾಗೂ ನಿರ್ಮಾಣದ `ಸೆಪ್ಟೆಂಬರ್ 10′ ಚಿತ್ರವು ಬಿಡುಗಡೆಗೂ ಮುನ್ನವೇ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ ಎಂಬ ಸಂದೇಶ ಹೊತ್ತು ತೆರೆಗೆ ಬರುತ್ತಿರುವ ಸೆಪ್ಟೆಂಬರ್ 10 ಚಲನಚಿತ್ರಕ್ಕೆ ಇದೀಗ ಯುನಿವರ್ಸಲ್ ಫಿಲಂ ಮೇಕರ್ಸ್ ಕೌನ್ಸಿಲ್ ಹಾಗೂ ಜೆನಸಿಸ್ ಅಲ್ಟಿಮಾ ದುಬೈನ ಸಹಯೋಗದೊಂದಿಗೆ ನಡೆಯುತ್ತಿರುವ ಹೈದರಾಬಾದ್ನ ಚಾರ್ ಮಿನಾರ್ 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದೆ. ಹೈದರಾಬಾದ್ನ ಪ್ರಸಾದ್ ಫಿಲಂ ಲ್ಯಾಬ್ನಲ್ಲಿ ಜುಲೈ 26, 27ರಂದು ನಡೆಯುತ್ತಿರುವ ಕಾರ್ಯಕ್ರಮದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಓಂ ಸಾಯಿಪ್ರಕಾಶ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಶ್ರೀದೇವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ರಾಜಮ್ಮ ಸಾಯಿಪ್ರಕಾಶ್ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಡಾ.ಎಸ್.ರಾಜು ಅವರು ಬೆನ್ನೆಲುಬಾಗಿ ನಿಂತು ಬಿಡುಗಡೆಗೆ ತಮ್ಮ ಸಹಕಾರ ನೀಡುತ್ತಿದ್ದಾರೆ.
