ಉದಯವಾಹಿನಿ, ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಒಂದೆಡೆ ಕಾಡಾನೆಗಳ ದಾಳಿ ನಡೆಯುತ್ತಿದ್ದರೆ ಮತ್ತೊಂದೆಡೆ ಚಿರತೆಗಳ ಕಾಟ ಹೆಚ್ಚಾಗಿದ್ದು, ಇಬ್ಬರ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಕಡೂರು ತಾಲೂಕಿನ ಸಖ್ರಾಯಪಟ್ಟಣ ಸಮೀಪದ ಮದಗದಕೆರೆ ಬಳಿ ನಡೆದಿದೆ. ಮೂರ್ತಣ್ಣ ಹಾಗೂ ಮಂಜಣ್ಣ ಚಿರತೆ ದಾಳಿಗೊಳಗಾದವರು.ಗ್ರಾಮದಿಂದ ಸಖ್ರಾಯಪಟ್ಟಣಕ್ಕೆ ಈ ಇಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಪೊದೆಯಲ್ಲಿದ್ದ ಚಿರತೆ ಏಕಾಏಕಿ ಇಬ್ಬರ ಮೇಲೆ ಎರಗಿದ್ದು, ಮೂರ್ತಣ್ಣ ಅವರ ಎಡಗೈಯನ್ನು ಸಂಪೂರ್ಣವಾಗಿ ಚಿರತೆ ತಿಂದು ಹಾಕಿದ್ದರೆ, ಮಂಜಣ್ಣನಿಗೂ ಸಹ ಗಂಭೀರವಾಗಿ ಗಾಯಗಳಾಗಿವೆ.ಇಬ್ಬರ ಚೀರಾಟ ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ದೌಡಾಯಿಸಿ ಗಲಾಟೆ ಮಾಡುತ್ತಿದ್ದಂತೆ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ಕಾಫಿನಾಡಿನ ಜನತೆ ಕಾಡುಪ್ರಾಣಿಗಳು ಹಾಗೂ ಮಾನವನ ಸಂಘರ್ಷದ ನಡುವೆ ಜೀವನ ಸಾಗಿಸುವಂತಾಗಿದೆ.
ಕಳೆದ ಕೆಲ ದಿನಗಳಿಂದ ಕಾಡಾನೆ ದಾಳಿಯಿಂದ ತತ್ತರಿಸಿದ್ದ ಜಿಲ್ಲೆಯ ಜನತೆಗೆ ಈಗ ಚಿರತೆ ಕಾಟ ಭಯ ಮೂಡಿಸಿದೆ. ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಎಮೆದೊಡ್ಡಿ, ಮದಗ, ಸಖ್ರಾಯಪಟ್ಟಣ, ಕಡೂರು ತಾಲ್ಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಯ ಓಡಾಟ ಕಂಡುಬಂದಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!