ಉದಯವಾಹಿನಿ, ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬರುವುದು ಖಚಿತ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಆ.10ರಂದು ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಲು ಬರುತ್ತಿದ್ದಾರೆ. ಪ್ರಧಾನಿಯವರು ಬರುವ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಸಂಬಂಧ ತಯಾರಿ ನಡೆಯುತ್ತಿರುವ ಬಗ್ಗೆ ಇಂದು ಪರಿಶೀಲನೆ ಮಾಡುತ್ತಿದ್ದೇನೆ. ಪ್ರಧಾನಿಯವರ ಬೇರೆ ಬೇರೆ ಕಾರ್ಯಕ್ರಮಗಳ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ದೊರೆತಿಲ್ಲ. ಬರುತ್ತೀವಿ ಎಂದು ಹೇಳಿದ್ದಾರಷ್ಟೇ. ಟೈಮ್ ಟು ಟೈಮ್ ಪ್ರೋಗ್ರಾಮ್ ಬಗ್ಗೆ ಇನ್ನೂ ಮಾಹಿತಿ ತಿಳಿಸಿಲ್ಲ ಎಂದರು.
ಆಗಸ್ಟ್ 10ರ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಆಗಸ್ಟ್ 10ರಂದು ಪ್ರಧಾನಿಯವರು ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆ ಮತ್ತು ವಂದೇ ಭಾರತ್ ರೈಲು ಉದ್ಘಾಟನೆಯಷ್ಟೇ ಮಾಡಲಿದ್ದಾರೆ. ಉಳಿದಂತೆ ಜಯನಗರ ಶಾಲಿನಿ ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಹಾಗೂ ರಾಗಿಗುಡ್ಡ ಟು ಜಯನಗರದವರೆಗೆ ರೋಡ್ ಶೋ ಇರುವುದಿಲ್ಲ. ಇವರೆಡೂ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಭಾಗವಹಿಸುವುದಿಲ್ಲ ಎಂದು ಹೇಳಿದರು.
ಒಂದು ವರ್ಷದ ನಂತರ ಮೋದಿಯವರ ಆಗಮನದ ನಿರೀಕ್ಷೆಯಲ್ಲಿದ್ದ (BJP) ಬಿಜೆಪಿ, ಕಾರ್ಯಕರ್ತರ ಸಮಾವೇಶ ಹಾಗೂ ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿತ್ತು. ಈ ಕಾರ್ಯಕ್ರಮಗಳು ರದ್ದಾದ ಹಿನ್ನೆಲೆ ಬಿಜೆಪಿ ನಾಯಕರಿಗೆ ನಿರಾಸೆಯಾಗಿದೆ.
