
ಉದಯವಾಹಿನಿ, ನವದೆಹಲಿ: ‘ಅಪ್ಪಾ.. ನಾವು ಬದುಕುಳಿಯುವುದಿಲ್ಲ.. ಇಲ್ಲಿ ಬಹಳಷ್ಟು ನೀರು ತುಂಬಿದೆ’.. ಇದು ಸಾವಿಗೂ ಮುನ್ನ ಪುತ್ರ ತನ್ನ ತಂದೆ ಜೊತೆ ನಡೆಸಿದ ಕೊನೆ ಸಂಭಾಷಣೆ. ತುತ್ತಿನ ಚೀಲ ತುಂಬಿಸಲು ದೂರದ ಪ್ರದೇಶಗಳಿಂದ ಬಂದಿದ್ದ ಕಾರ್ಮಿಕ ದಂಪತಿ ಜೀವನದಲ್ಲಿ ನಡೆದ ದುರಂತ ಘೋರ.ಉತ್ತರಾಖಂಡದ ಉತ್ತರಕಾಶಿಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಉಂಟಾಗಿ ಪ್ರವಾಹದಲ್ಲಿ ಮಗನನ್ನು ಕಳೆದುಕೊಂಡು ತಂದೆ ರೋಧಿಸಿದ್ದಾರೆ. ಸಾವಿಗೂ ಮುನ್ನ ಪುತ್ರ ತನ್ನ ಜೊತೆ ನಡೆಸಿದ ಸಂಭಾಷಣೆ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ.
ನೇಪಾಳದ ವಲಸೆ ಕಾರ್ಮಿಕರಾದ ಕಾಳಿ ದೇವಿ ಮತ್ತು ಆಕೆ ಪತಿ ವಿಜಯ್ ಸಿಂಗ್ ದುರಂತದಲ್ಲಿ ಪಾರಾಗಿ ಬದುಕುಳಿದ ದಂಪತಿಯಾಗಿದ್ದಾರೆ. ಭಟ್ವಾರಿ ಹೆಲಿಪ್ಯಾಡ್ನಲ್ಲಿ ಕುಳಿತಿದ್ದ ಸಿಂಗ್, ತನ್ನ ಮಗನೊಂದಿಗಿನ ಕೊನೆಯ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ. ಮಗನನ್ನು ಕಾಪಾಡಲು ಸಾಧ್ಯವಾಗದ, ಸಾಂತ್ವನ ಹೇಳಲಾಗದ ತಮ್ಮ ಅಸಹಾಯಕ ಸ್ಥಿತಿ ನೆನೆದು ಮರುಗಿದ್ದಾರೆ.
ಕಣಿವೆಯಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ನೇಪಾಳದಿಂದ ಆಗಮಿಸಿದ 26 ಜನರ ಗುಂಪಿನಲ್ಲಿ ಈ ಕಾರ್ಮಿಕನೂ ಇದ್ದ. ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸುಮಾರು 47 ಕಿಲೋಮೀಟರ್ ದೂರದಲ್ಲಿರುವ ಭಟ್ವಾರಿಗೆ ತೆರಳಿದ್ದು ಈ ದಂಪತಿ ಮಾತ್ರ. ಒಂದು ದಿನದ ನಂತರ, ಉಳಿದ 24 ಸದಸ್ಯರಲ್ಲಿ ಯಾರನ್ನೂ ಸಂಪರ್ಕಿಸಲು ಇವರಿಂದ ಸಾಧ್ಯವಾಗಲಿಲ್ಲ.
