ಉದಯವಾಹಿನಿ, ಹಾಸನ: ರಾಕಿಂಗ್ ಸ್ಟಾರ್ ಯಶ್ ತಾಯಿ ಮನೆ ಸಮೀಪದ ನಿವೇಶನ ಮಾಲೀಕತ್ವ ಜಟಾಪಟಿ ಮತ್ತೆ ಸುದ್ದಿಯಾಗಿದೆ. ಯಶ್ ತಾಯಿ ಮನೆ ಬಳಿಯ ಕಾಂಪೌಂಡ್ ಕೆಡವಿಸಿದ್ದ ಮಾಲೀಕನ ಜೊತೆ ಪುಷ್ಪಾ ಅರುಣ್ಕುಮಾರ್ ವಾಗ್ವಾದ ನಡೆಸಿದ್ದಾರೆ.
ಸೈಟ್ ಬಳಿ ಆಗಮಿಸಿರುವ ಯಶ್ ತಾಯಿ ಪುಷ್ಪಾ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದರು. ಇದೇ ವೇಳೆ ಸೈಟ್ ಬಳಿ ದೇವರಾಜು ಆಗಮಿಸಿದ್ದಾರೆ. ದೇವರಾಜು ಅವರಿಗೆ ದಾಖಲೆಗಳನ್ನು ತೋರಿಸು ಎಂದ ಪುಷ್ಪಾ ಅವರು ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಮೊದಲು ದಾಖಲೆಗಳನ್ನು ಕೊಡು ಎಂದು ಪುಷ್ಪಾ ಅವರು ಪ್ರಶ್ನಿಸಿದ್ದಾರೆ. ಸೆಲೆಬ್ರಿಟಿ ನನ್ನ ಮಗ, ನಾನಲ್ಲ. ನಾನು ಇಲ್ಲಿ ಹುಟ್ಟಿ ಬೆಳೆದವಳು. ಸೈಟ್ ಒಳಗೆ ಕಾಲಿಡಬೇಡ ಎಂದ ಪುಷ್ಪಾ ಏರುದನಿಯಲ್ಲಿ ಮಾತನಾಡಿದ್ದಾರೆ. ನೀವು ಈ ರೀತಿ ಮಾತನಾಡಬಾರದು ಎಂದ ದೇವರಾಜು ಹೇಳಿದ್ದಾರೆ.
ರೌಡಿಗಳನ್ನು ಕರೆದುಕೊಂಡು ರೌಡಿಸಂ ಮಾಡ್ತೀಯಾ. ನಾನು ಎಸ್ಪಿಗೆ ದೂರು ಕೊಡ್ತೀನಿ. ಇನ್ಮುಂದೆ ಇಲ್ಲಿಗೆ ಕಾಲಿಟ್ಟರೆ ಸುಮ್ಮನ್ನಿರಲ್ಲ ಎಂದು ಯಶ್ ತಾಯಿ ಎಚ್ಚರಿಕೆ ಕೊಟ್ಟಿದ್ದಾರೆ.
