ಉದಯವಾಹಿನಿ, ಮಂಡ್ಯ: ವ್ಯಕ್ತಿಯೊಬ್ಬ ಧರಿಸಿದ್ದ ವೈಟ್‌ ಶರ್ಟ್‌ನಿಂದ ಟಾರ್ಗೆಟ್‌ ಮಾಡಿದವನನ್ನ ಬಿಟ್ಟು ಹಂತಕರ ಗ್ಯಾಂಗ್‌ ಮತ್ತೊಬ್ಬನನ್ನು ಹತ್ಯೆಗೈದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ರಸ್ತೆ ಬಳಿ ನಡೆದಿದೆ. ವಡ್ಡರಹಳ್ಳಿ ಗ್ರಾಮದ ಅರುಣ್ (34) ಕೊಲೆಯಾದ ದುರ್ದೈವಿ. ಬೆಂಗಳೂರಿನಲ್ಲಿ ಕ್ಯಾಬ್‌ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಅರುಣ್‌ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಶುಕ್ರವಾರ ರಾತ್ರಿ ಊರಿಗೆ ಬಂದಿದ್ದ. ಈ ವೇಳೆ 8-10 ಮಂದಿ ದುಷ್ಕರ್ಮಿಗಳು ಸೇರಿ ಲಾಂಗು, ಮಚ್ಚು, ಡ್ರ್ಯಾಗರ್‌ನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ.
ಅಷ್ಟಕ್ಕೂ ಕರಾಳ ರಾತ್ರಿಯಲ್ಲಿ ನಡೆದಿದ್ದೇನು..?: ಮೃತ ಅರುಣ್‌ ಸ್ನೇಹಿತ ಸೂರ್ಯ, ಸಹೋದರ ಉಮೇಶ್‌ ಹಾಗೂ ಸಂಬಂಧಿ ದೇವರಾಜ್‌ ಜೊತೆಗೆ ಬಾರ್‌ನಲ್ಲಿ ಪಾರ್ಟಿ ಮಾಡ್ತಿದ್ದ. ಬಾರ್‌ ಮುಂಭಾಗ ಸಿಕ್ಕ ವಿಕಾಸ್‌ ಎಂಬಾತನೊಂದಿಗೆ ಹಳೇ ದ್ವೇಷದ ಹಿನ್ನೆಲೆ ಸೂರ್ಯ ಕಿರಿಕ್‌ ತೆಗೆದಿದ್ದ. 2 ವರ್ಷಗಳ ಹಿಂದಿನ ಜಗಳದ ವಿಚಾರ ತೆಗದು ಸೂರ್ಯ ವಿಕಾಸ್‌ ಮೇಲೆ ಹಲ್ಲೆ ಮಾಡಿದ್ದ. ಆದ್ರೆ ಅರುಣ್‌ ಇವರಿಬ್ಬರ ಜಗಳ ಬಿಡಿಸಿ ಮತ್ತೆ ಪಾರ್ಟಿ ಮುಂದುವರಿಸಿದ್ದ. ಕೆಲಹೊತ್ತಿನ ಬಳಿಕ ತಂಡ ಕಟ್ಟಿಕೊಂಡು ಬಂದ ವಿಕ್ರಮ್, ಪಾರ್ಟಿ ಮಾಡ್ತಿದ್ದ ಸೂರ್ಯ ಹಾಗೂ ಸ್ನೇಹಿತರ ಮೇಲೆ ಅಟ್ಯಾಕ್ ಮಾಡಿದ್ದಾನೆ. ಸೂರ್ಯ ಮತ್ತು ಉಮೇಶ್ ಒಂದಕಡೆ ಓಡಿದ್ರೆ, ಅರುಣ್ ಮತ್ತು ದೇವರಾಜು ಮತ್ತೊಂದು ದಿಕ್ಕಿಗೆ ಓಡಿ ಪರಾರಿಯಾಗಲು ಯತ್ನಿಸಿದ್ದಾರೆ. ಸೂರ್ಯ ಬಿಳಿಬಣ್ಣದ ಅಂಗಿ ಹಾಕಿರುವುದಾಗಿ ಸುಳಿವು ಹಿಡಿದು ಬಂದಿದ್ದ ಹಂತಕರು ಅರುಣ್ ಕೂಡ ವೈಟ್ ಶರ್ಟ್ ಧರಿಸಿದ್ದರಿಂದ ಅರುಣ್‌ನನ್ನ ಫಾಲೋ ಮಾಡಲು ಶುರುಮಾಡಿದ್ರು. ಹೆಮ್ಮನಹಳ್ಳಿ ರಸ್ತೆಯ ನಿರ್ಜನ ಪ್ರದೇಶದ ಬಳಿ ಅರುಣ್‌ ಲಾಕ್ ಆಗ್ತಿದ್ದಂತೆ ಜೊತೆಯಲ್ಲಿದ್ದ ದೇವರಾಜು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಳಿಕ ಅರುಣ್‌ಗೆ ಮನಸ್ಸೋ‌ ಇಚ್ಛೆ ಥಳಿಸಿದ ದುಷ್ಕರ್ಮಿಗಳು, ಡ್ರಾಗರ್, ಮಚ್ಚು, ಲಾಂಗುಗಳಿಂದ ಕೊಚ್ಚಿ ಕೊಲೆಗೈದಿದ್ರು.

Leave a Reply

Your email address will not be published. Required fields are marked *

error: Content is protected !!