ಉದಯವಾಹಿನಿ, ಮೇಘಾಲಯ: ಸುಮಾರು ಎಂಟರಿಂದ ಒಂಬತ್ತು ಸಶಸ್ತ್ರ ಬಾಂಗ್ಲಾದೇಶಿ ಗ್ಯಾಂಗ್ ವೊಂದು ಭಾರತಕ್ಕೆ ನುಸುಳಿದ್ದು, ಮೇಘಾಲಯದ ಗ್ರಾಮಸ್ಥನೊಬ್ಬನ ಮೇಲೆ ಹಲ್ಲೆ ನಡೆಸಿದೆ. ಈ ಘಟನೆ ಬಾಂಗ್ಲಾದೇಶ (Bangladesh) ಗಡಿಯಿಂದ ಕೆಲವೇ ನೂರು ಮೀಟರ್ ದೂರದಲ್ಲಿರುವ ನೈಋತ್ಯ ಖಾಸಿ ಬೆಟ್ಟಗಳ ರೊಂಗ್ಡೊಂಗೈ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಕತ್ತಲಿನಲ್ಲಿ ಈ ತಂಡ ಭಾರತದ ಗಡಿ ದಾಟಿ ಒಳಗೆ ಬಂದಿದ್ದು, ಇವರು ಚಾಕು, ಬಂದೂಕು ಅನ್ನು ಹೊಂದಿದ್ದರು. ಇವರಲ್ಲಿ ನಾಲ್ವರನ್ನು ಗಡಿ ಭದ್ರತಾ ಪಡೆ (Border Security Force) ಮತ್ತು ಮೇಘಾಲಯ ಪೊಲೀಸರು (Meghalaya Police) ಬಂಧಿಸಿದ್ದಾರೆ.
ರೊಂಗ್ಡೊಂಗೈ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಚಾಕು, ಬಂದೂಕುಗಳನ್ನು ಹೊಂದಿದ್ದ ಸುಮಾರು ಎಂಟು ಒಂಬತ್ತು ಮಂದಿ ಗ್ರಾಮಸ್ಥನೊಬ್ಬನಿಗೆ ಇರಿದು ಗಡಿಯುದ್ದಕ್ಕೂ ಎಳೆದುಕೊಂಡು ಹೋಗಲು ಪ್ರಯತ್ನಿಸಿದೆ. ಬಳಿಕ ಇದು ಸಾಧ್ಯವಾಗದೆ ತಪ್ಪಿಸಿಕೊಂಡಿದೆ. ಭಾರತದ ಗಡಿಯ ಬಳಿ ಕಾರ್ಯನಿರ್ವಹಿಸುವ ಅಂಗಡಿಯ ಮಾಲೀಕ ಬಾಲ್ಸ್ರಂಗ್ ಎ ಮಾರಕ್ನನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ಅವನು ನಿದ್ರಿಸುತ್ತಿದ್ದಾಗ ಆತನ ಅಂಗಡಿಗೆ ನುಗ್ಗಿ ಅವನ ಕೈಗೆ ಕೋಳ ಹಾಕಿ ಗಡಿಯ ಕಡೆಗೆ ಎಳೆದೊಯ್ಯಲು ಪ್ರಯತ್ನಿಸಿದರು. ಆದರೆ ಆತ ತಪ್ಪಿಸಿಕೊಂಡು ಮನೆಯೊಂದಕ್ಕೆ ನುಗ್ಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವ ಮಾರಕ್, ಬಾಂಗ್ಲಾ ಗ್ಯಾಂಗ್ ನವರು ನನ್ನ ಗಂಟಲು ಸೀಳುತ್ತಿದ್ದರು. ಕತ್ತಲೆಯಲ್ಲಿ ನನ್ನ ಮೇಲೆ ಗುಂಡು ಹಾರಿಸಿದಾಗ ನಾನು ತಪ್ಪಿಸಿಕೊಂಡು ಹತ್ತಿರದ ಮನೆಗೆ ನುಗ್ಗಿದೆ ಎಂದು ತಿಳಿಸಿದ್ದಾರೆ. ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಬಿಎಸ್ಎಫ್ ಇನ್ಸ್ಪೆಕ್ಟರ್ ಜನರಲ್ ಒಪಿ ಉಪಾಧ್ಯಾಯ, ಇದೊಂದು ನಾಚಿಗೇಡಿನ ಕೃತ್ಯ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಉಳಿದವರನ್ನೂ ಬಂಧಿಸಲಾಗುವುದು. ಬಿಎಸ್ಎಫ್, ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ಒಟ್ಟಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು. ಬಂಧಿತರನ್ನು ಮೆಫಸ್ ರೆಹಮಾನ್ (35), ಜಂಗಿರ್ ಅಲೋಮ್ (25), ಮೇರುಫೂರ್ ರೆಹಮಾನ್ (32) ಮತ್ತು ಸೇಮ್ ಹುಸೇನ್ (30) ಎಂದು ಗುರುತಿಸಲಾಗಿದೆ. ಇವರು ಅರಣ್ಯ ಪ್ರದೇಶದೊಳಗೆ ನುಗ್ಗಿದ್ದು, ಓಡಿ ಬೆನ್ನಟ್ಟಿ ಬಂಧಿಸಲಾಯಿತು ಎಂದು ಉಪಾಧ್ಯಾಯ ಹೇಳಿದರು.
