ಉದಯವಾಹಿನಿ, ಬಳ್ಳಾರಿ: ಬೆಳ್ಳಂಬೆಳಗ್ಗೆ ಇಬ್ಬರು ಗಣಿ ಉದ್ಯಮಿಗಳಿಗೆ ಇ.ಡಿ ಶಾಕ್ ಕೊಟ್ಟಿದೆ. ಉದ್ಯಮಿಗಳ ಮನೆ, ಕಚೇರಿ ಹಾಗೂ ಸ್ಟೀಲ್ ಅಂಗಡಿ ಸೇರಿದಂತೆ ಏಕಕಾಲದಲ್ಲಿ ಮೂರು ಕಡೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಗಣಿ ಉದ್ಯಮಿಗಳಾದ ಸ್ವಸ್ತಿಕ್ ನಾಗರಾಜ್ ಹಾಗೂ ಕಾಂಗ್ರೆಸ್ ನಗರಸಭೆ ಸದಸ್ಯ ಕಾರದಪುಡಿ ಮಹೇಶಗೆ ಸೇರಿದ ಮನೆ, ಅಂಗಡಿ, ಕಚೇರಿ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸ್ವಸ್ತಿಕ್ ನಾಗರಾಜ್ಗೆ ಸೇರಿದ ಹೊಸಪೇಟೆಯ ಎಂಜೆ ನಗರದ ಮನೆ, ಎಪಿಎಂಸಿಯ ಬಳಿ ಇರೋ ಸ್ಟೀಲ್ ಅಂಗಡಿ ಮತ್ತು ಕಚೇರಿ ಮೇಲೆ ದಾಳಿ ಮಾಡಲಾಗಿದೆ.
ಮತ್ತೊಂದೆಡೆ 20ನೇ ವಾರ್ಡ್ನ ಕಾಂಗ್ರೆಸ್ ಸದಸ್ಯರಾಗಿರುವ ಕಾರದಪುಡಿ ಮಹೇಶ್ ಮನೆಯಲ್ಲೂ ಶೋಧ ನಡೆಸಲಾಗುತ್ತಿದೆ. ಇಬ್ಬರೂ ಗಣಿ ಉದ್ಯಮಿಗಳ ಮನೆಯಲ್ಲಿ ಇ.ಡಿ ಅಧಿಕಾರಿಗಳು ತೀವ್ರಶೋಧ ನಡೆಸುತ್ತಿದ್ದಾರೆ. ಬೆಲೆಕೇರಿ ಅದಿರು ಅಕ್ರಮ ಸಾಗಣೆ ಪ್ರಕರಣದಲ್ಲಿ ಇಬ್ಬರೂ ಗಣಿ ಉದ್ಯಮಿಗಳು ಭಾಗಿಯಾಗಿರುವ ಆರೋಪ ಹೊತ್ತಿದ್ದಾರೆ.
