ಉದಯವಾಹಿನಿ, ಚಾಮರಾಜನಗರ: ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಜಮೀನು ವಶ ಪಡಿಸಿಕೊಂಡ ಹಿನ್ನೆಲೆ ಮನನೊಂದು ಮಹಿಳೆ ನೇಣಿಗೆ ಶರಣಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ರಾಜಮ್ಮ (52) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ದೊಡ್ಡಾಲತ್ತೂರಿನಲ್ಲಿ ಘಟನೆ ನಡೆದಿದೆ. ರಾಜಮ್ಮರಿಗೆ ಪಿತ್ರಾರ್ಜಿತವಾಗಿ 90 ಸೆಂಟ್ಸ್ ಭೂಮಿ ಬಂದಿತ್ತು. ಇದ್ದ ಚೂರುಪಾರು ಭೂಮಿಯಲ್ಲಿ ಕುಟುಂಬ ವ್ಯವಸಾಯ ಮಾಡಿಕೊಂಡಿತ್ತು. ಕಳೆದ ವಾರ ಇದ್ದಕ್ಕಿದ್ದ ಹಾಗೆ ಬಂದ ಕಂದಾಯ ಇಲಾಖೆಯ ಅಧಿಕಾರಿಗಳು 20 ಸೆಂಟ್ಸ್ ಭೂಮಿ ವಶಪಡಿಸಿಕೊಂಡಿದ್ದರು. ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಇದರಿಂದ ಬೇಸತ್ತು ರಾಜಮ್ಮ ಇಂದು ಮುಂಜಾನೆ ತಮ್ಮ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ.
