ಉದಯವಾಹಿನಿ, ನವದೆಹಲಿ: ಧಾರ್ಮಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು 2024ರ ಡಿಸೆಂಬರ್ 31ಕ್ಕೂ ಮುನ್ನ ದಾಖಲೆಗಳಿಲ್ಲದೇ ಪಾಕಿಸ್ತಾನ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ಬಂದ ಧಾರ್ಮಿಕ ಅಲ್ಪಸಂಖ್ಯಾತರಿಗೆ (ಮುಸ್ಲಿಮೇತರ ಸಮುದಾಯಗಳಿಗೆ) ಭಾರತದಲ್ಲಿ ಉಳಿಯಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ.
ಪಾಸ್ಪೋರ್ಟ್ ಅಥವಾ ಇತರ ಪ್ರಯಾಣ ದಾಖಲೆಗಳಿಲ್ಲದೇ ಬಂದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಕ್ರೈಸ್ತರು ಹಾಗೂ ಪಾರ್ಸಿಗಳಿಗೆ ಭಾರತದಲ್ಲಿ ಉಳಿಯಲು ಅವಕಾಶ ನೀಡುವುದಾಗಿ ಹೇಳಿದೆ. ಜೊತೆಗೆ ದೇಶ ಪ್ರವೇಶಿಸಿದ್ದು ದಾಖಲೆಗಳು ಸಿಂಧುತ್ವದ ಅವಧಿ ಮೀರಿದ್ದರೆ ಅಂತಹವರಿಗೂ ಈ ನಿಯಮ ಅನ್ವಯಿಸಲಿದೆ ಎಂದು ಗೃಹ ಸಚಿವಾಲಯ ಆದೇಶದಲ್ಲಿ ತಿಳಿಸಿದೆ.
ಕಳೆದ ವರ್ಷ ಮಾರ್ಚ್ 11ರಂದು ಜಾರಿಗೆ ಬಂದ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕಾರ, 2014 ಡಿಸೆಂಬರ್ 31ರ ನಂತರ ಅಥವಾ ಅದಕ್ಕೂ ಮುನ್ನ ಧಾರ್ಮಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಬಂದ ಅಲ್ಪಸಂಖ್ಯಾತ ಸದಸ್ಯರಿಗೆ ಭಾರತದ ಪೌರತ್ವ ನೀಡಲಾಗುವುದು. 2025ರ ವಲಸೆ ಮತ್ತು ವಿದೇಶಿಗರ ಕಾಯ್ದೆ ಅಡಿಯಲ್ಲಿ ಈ ಮಹತ್ವದ ಆದೇಶ ಹೊರಡಿಸಲಾಗಿದೆ. ಇದರಿಂದ 2014ರ ನಂತರ ಭಾರತಕ್ಕೆ ವಲಸೆ ಬಂದು ತಮ್ಮ ಬಗ್ಗೆ ಚಿಂತಿತರಾಗಿದ್ದ ಪಾಕಿಸ್ತಾನದ ಹಿಂದೂಗಳಿಗೆ ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಜನರಿಗೆ ಅನುಕೂಲ ಆಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
