ಉದಯವಾಹಿನಿ, ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ಅವರು, ನಿವೃತ್ತ ಐಆರ್‌ಎಸ್‌ ಅಧಿಕಾರಿ ಗಣಪತಿ ಭಟ್ (Ganapati Bhat) ಅವರನ್ನು, ನ್ಯಾಯಮೂರ್ತಿ ಯಶವಂತ ವರ್ಮಾ (Yashwant Varma) ಅವರ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ರಚಿಸಲಾದ ಮೂವರು ಸದಸ್ಯರ ತನಿಖಾ ಸಮಿತಿಗೆ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಈ ಸಮಿತಿಯ ಸದಸ್ಯರಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ಹಿರಿಯ ವಕೀಲ ಬಿ.ವಿ.ಆಚಾರ್ಯ ನಿಯುಕ್ತಿಯಾಗಿದ್ದಾರೆ.

1989ನೇ ಬ್ಯಾಚ್‌ನ (ಆದಾಯ ತೆರಿಗೆ) ಐಆರ್‌ಎಸ್‌ ಅಧಿಕಾರಿಯಾಗಿದ್ದ ಗಣಪತಿ ಭಟ್‌ ಇತ್ತೀಚೆಗೆ ಬೆಂಗಳೂರು ಕಚೇರಿ ಹೊಂದಿದ್ದ ಕರ್ನಾಟಕ ಮತ್ತು ಗೋವಾ ಪ್ರಾದೇಶಿಕ ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಆಯುಕ್ತ ಸ್ಥಾನದಿಂದ ನಿವೃತ್ತರಾಗಿದ್ದಾರೆ. ಇದಕ್ಕೂ ಮುನ್ನ ಅವರು ದೆಹಲಿಯಲ್ಲಿ ಅಂತಾರಾಷ್ಟ್ರೀಯ ತೆರಿಗೆ ವಿಭಾಗದ ಪ್ರಧಾನ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಆದಾಯ ತೆರಿಗೆ ಇಲಾಖೆಯ ಮೂರು ದಶಕಗಳಿಗಿಂತ ಹೆಚ್ಚಿನ ವೃತ್ತಿಜೀವನದಲ್ಲಿ ಅವರು ಹಲವಾರು ಪ್ರಮುಖ ಮತ್ತು ಸೂಕ್ಷ್ಮ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಸಂಕೀರ್ಣ ತನಿಖೆಗಳು ಹಾಗೂ ನೀತಿ ವಿಷಯಗಳಲ್ಲಿನ ಪರಿಣತಿಗೆ ಪ್ರಸಿದ್ಧರಾಗಿದ್ದಾರೆ. ಇಲಾಖೆಯಲ್ಲಿ ಕೆಲಸ ಮಾಡುವ ಅವಧಿಯಲ್ಲಿ ಮತ್ತು ಇತ್ತೀಚೆಗೆ ಕರ್ನಾಟಕ–ಗೋವಾ ಮತ್ತು ಕೇರಳದ ಆದಾಯ ತೆರಿಗೆ ತನಿಖಾ ಮಹಾನಿರ್ದೇಶಕರಾಗಿದ್ದಾಗ, ಅವರು ಅನೇಕ ರೋಚಕ ಪ್ರಕರಣಗಳಲ್ಲಿ ಆದಾಯ ತೆರಿಗೆ ತನಿಖೆಗಳನ್ನು ನಡೆಸಿ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಗೆ ಕಾರಣರಾಗಿದ್ದರು. ಭಾರತೀಯ ಪ್ರಜೆಗಳು ಹೊಂದಿರುವ ಗಡಿಯಾಚೆಗಿನ ಹಣಕಾಸು ವ್ಯವಹಾರಗಳು, ಸಾಗರೋತ್ತರ ಆಸ್ತಿಗಳು ಮತ್ತು ವಿದೇಶಿ ಬ್ಯಾಂಕ್ ಖಾತೆಗಳ ಕುರಿತು ಮಾಹಿತಿ ಸಂಗ್ರಹಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಅವರ ವೃತ್ತಿಪರ ಕಾರ್ಯವು ಕಾನೂನಿನ ಸೂಕ್ಷ್ಮದೃಷ್ಟಿ, ತನಿಖಾ ಕೌಶಲ್ಯ ಮತ್ತು ನೀತಿ ಒಳನೋಟಗಳ ಅಪರೂಪದ ಸಮ್ಮಿಶ್ರಣದ ನಿದರ್ಶನವಾಗಿದೆ.

Leave a Reply

Your email address will not be published. Required fields are marked *

error: Content is protected !!