ಉದಯವಾಹಿನಿ, ಬೆಂಗಳೂರು: ಮೃತರೆಲ್ಲ ಹಳ್ಳಿಯವರು, 10 ಲಕ್ಷ ರೂ. ಪರಿಹಾರ ಕೊಟ್ರೆ ಒಳ್ಳೆಯದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರೀತಿಯ ಘಟನೆ ಆಗಬಾರದಿತ್ತು. ಗಣೇಶೋತ್ಸವ ಸಂದರ್ಭದಲ್ಲಿ ಹೀಗೆ ಆಗಿದ್ದು ನೋವು ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಸರ್ಕಾರ ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಮೃತರೆಲ್ಲ ಹಳ್ಳಿಯವರು, ಹೀಗಾಗಿ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ನಾನು ಹಾಸನಕ್ಕೆ ಹೋಗ್ತಿದ್ದೀನಿ, ಡಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಆಸ್ಪತ್ರೆಗೂ ಭೇಟಿ ಮಾಡುತ್ತೇನೆ. ಸರ್ಕಾರ ಗಾಯಾಳುಗಳನ್ನು ಬೆಂಗಳೂರು, ಮೈಸೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು ಎಂದಿದ್ದಾರೆ.
ಇದೇ ವೇಳೆ ಚಿತ್ರದುರ್ಗದಲ್ಲಿ ಗಣೇಶ ವಿಸರ್ಜನೆ ವಿಚಾರವಾಗಿ ಮಾತನಾಡಿ, ಚಿತ್ರದುರ್ಗದಲ್ಲಿ ಪ್ರತಿ ವರ್ಷ ಗಣೇಶ ವಿಸರ್ಜನೆ ದೊಡ್ಡ ಮಟ್ಟದಲ್ಲಿ ಮಾಡುತ್ತಾರೆ. ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಸುತ್ತಮುತ್ತಲಿನ ಜಿಲ್ಲೆಯ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಬೇಕು. ಯಾವುದೇ ಕಿಡಿಕೇಡಿಗಳು ಮಸೀದಿಯಿಂದ ಕಲ್ಲು ಹಾಕೋದಕ್ಕೆ ಅವಕಾಶ ಕೊಡಬಾರದು. ಎಲ್ಲಾ ರಸ್ತೆಯಲ್ಲಿ ಗಣೇಶ ಹೋಗಬಹುದು, ಯಾರು ಅಡ್ಡಿ ಮಾಡಬಾರದು ಅಂತ ಮುಸ್ಲಿಮರೇ ಹೇಳಿದ್ದಾರೆ. ಕೆಲವು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಕೋಮುಗಲಭೆ ಸೃಷ್ಟಿ ಮಾಡ್ತಾರೆ. ಸರ್ಕಾರ ಕೂಡಾ ಅಂತಹವರ ಕೇಸ್ ವಾಪಸ್ ಪಡೆಯುವುದರಿಂದ ಅವರಿಗೆ ಕುಮ್ಮಕ್ಕು ಬರ್ತಿದೆ. ಪಾಕಿಸ್ತಾನ ಗಿರಾಕಿಗಳಿಗೆ ಪಾಠ ಕಲಿಸಬೇಕು. ಆಗ ಇಂತಹ ಘಟನೆಗಳು ಆಗೋದಿಲ್ಲ ಎಂದು ಆಗ್ರಹಿಸಿದ್ದಾರೆ.

ಧರ್ಮಸ್ಥಳ ಕೇಸ್ ತನಿಖೆ ವಿಳಂಬ ವಿಚಾರವಾಗಿ ಮಾತನಾಡಿ, ಸರ್ಕಾರ ಯಾರನ್ನೋ ರಕ್ಷಣೆ ಮಾಡೋಕೆ ತನಿಖೆಯನ್ನು ವಿಳಂಬ ಮಾಡಿಸುತ್ತಿದೆ. ಎಸ್‌ಐಟಿಗೆ ಬುರುಡೆ ಅಗೆಯೋದ್ರಲ್ಲಿ ಇದ್ದ ಉತ್ಸಾಹ ತನಿಖೆ ಮಾಡೋದ್ರಲ್ಲಿ ಇಲ್ಲ. ಜಿಂಕೆಯAತೆ ಬುರುಡೆ ಅಗೆದು ಆಮೆಗತಿಯಲ್ಲಿ ತನಿಖೆ ಮಾಡ್ತಿದ್ದಾರೆ. ತನಿಖೆ ನಡೆಯೋದು ನೋಡಿದ್ರೆ ಸರ್ಕಾರವೇ ನಿಧಾನವಾಗಿ ತನಿಖೆ ಮಾಡಿ ಅಂತ ಸೂಚನೆ ಕೊಟ್ಟಂತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!