ಉದಯವಾಹಿನಿ, ಬೆಂಗಳೂರು: ವಿಧಾನ ಮಂಡಲಗಳಲ್ಲಿ ನಡೆಯುವ ಸಮಾಜಮುಖಿ ಹಾಗೂ ಆರೋಗ್ಯಪೂರ್ಣ ಚರ್ಚೆಗಳೇ ಪ್ರಜಾಪ್ರಭುತ್ವದ ಯಶಸ್ಸಿಗೆ ಮೂಲಾಧಾರವಾಗಿವೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಮತ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ 11ನೇ ಕಾಮನ್ ವೆಲ್ತ್ ಸಂಸದೀಯ ಸಂಘ ಭಾರತ ವಲಯದ ಸಮ್ಮೇಳನದಲ್ಲಿ ವಿಧಾನ ಮಂಡಲದ ಚರ್ಚೆಗಳು ಜನರ ವಿಶ್ವಾಸಗಳಿಸುವುದರೊಂದಿಗೆ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿಯ ಪಾತ್ರ ಕುರಿತ ವಿಚಾರ ಮಂಡಿಸಿದ ಬಸವರಾಜ ಹೊರಟ್ಟಿ, ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕ ಕಾಳಜಿಗಳನ್ನು ಚರ್ಚಿಸಲು ಸರ್ಕಾರಿ ನೀತಿಗಳನ್ನು ಪರಿಶೀಲಿಸಲು ಮತ್ತು ಕಾನೂನು ರಚನೆಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಿಧಾನ ಮಂಡಲ ಪರಿಣಾಮಕಾರಿ ವೇದಿಕೆಯಾಗಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
ಸದನವು ಕ್ರಮಬದ್ಧವಾಗಿಲ್ಲದಿದ್ದಾಗ ಮತ್ತು ಅರ್ಥಪೂರ್ಣ ಚರ್ಚೆಯಿಲ್ಲದೆ ಕಾನೂನುಗಳನ್ನು ಅಂಗೀಕರಿಸಿದಾಗ ನಮ್ಮ ಮೇಲಿನ ಜನರ ನಂಬಿಕೆಗಳು ಕ್ಷೀಣಿಸುವ ಸಂದರ್ಭ ಬರಬಹುದೆನ್ನುವ ಎಚ್ಚರಿಕೆ ಜನಪ್ರತಿನಿಧಿಗಳಿಗಿರಬೇಕು ಎಂದು ಹೇಳಿದರು. ಸದನ ಕಲಾಪಗಳ ಪ್ರಧಾನ ಅಂಶಗಳಾದ ಪ್ರಶ್ನೋತ್ತರ ಅವಧಿ, ಶೂನ್ಯವೇಳೆ ಚರ್ಚೆ, ಅರ್ಧಗಂಟೆಯ ಚರ್ಚೆ, ಕಿರುಸೂಚನೆ ಪ್ರಶ್ನೆಗಳು ಮತ್ತು ಸದನದ ಗಮನ ಸೆಳೆಯುವ ಪ್ರಸ್ತಾವಗಳ ಮೂಲಕ ಪ್ರತಿಯೊಬ್ಬ ಸದಸ್ಯರು ಸದನದಲ್ಲಿನ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಸುಗಮ ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಪ್ರತಿನಿಧಿಗಳು ಯಾವಾಗಲೂ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!