ಉದಯವಾಹಿನಿ, ನವದೆಹಲಿ : ದುಬೈನಲ್ಲಿ ಇಂದು ರಾತ್ರಿ ನಡೆಯಲಿರುವ ಭಾರತ-ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾ ಕಪ್-೨೦ ಕ್ರಿಕೆಟ್ ಪಂದ್ಯಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದು, ಈ ಪಂದ್ಯವನ್ನು ಬಹಿಷ್ಕರಿಸಿ ಎಂಬ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ.
ಬಾಯ್ಕಾಟ್ ಇಂಡಿಯಾ ವರ್ಸಸ್ ಪಾಕ್ ಎಂಬ ಆಶ್ಟ್ಯಾಗ್ ಬಳಸಿ ಪಂದ್ಯ ಬಹಿಷ್ಕರಿಸಲು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕರೆ ನೀಡಿದ್ದು, ನಿವೃತ್ತ ಸೇನಾಧಿಕಾರಿಗಳೂ ಸೇರಿದಂತೆ ಹಲವರು ಈ ಅಭಿಯಾನದಲ್ಲಿ ಭಾಗಿಯಾಗಿ ಭಾರತ-ಪಾಕ್ ನಡುವೆ ಕ್ರಿಕೆಟ್ ಪಂದ್ಯ ನಡೆಯಬಾರದು.
ಈ ಪಂದ್ಯವನ್ನು ಯಾರೂ ನೋಡದೆ ಬಹಿಷ್ಕರಿಸಬೇಕು ಎಂಬ ಕರೆಯನ್ನು ನೀಡಲಾಗಿದೆ. ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಶಿವಸೇನೆ, ಆಮ್ಆದ್ಮಿಪಕ್ಷ, ಸಂಸದ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಸೇರಿದಂತೆ ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲೂ ಭಾರತ-ಪಾಕ್ ಪಂದ್ಯಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಪಂದ್ಯ ಬಹಿಷ್ಕಾರದ ಕರೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ನೀಡಿದ್ದಾರೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಏ. ೨೨ ರಂದು ಭಯೋತ್ಪಾದಕರ ದಾಳಿಯಲ್ಲಿ ೨೬ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಗಡಿಯಲ್ಲಿ ನಮ್ಮ ಯೋಧರು ಪ್ರಾಣ ಕಳೆದುಕೊಳ್ಳುತ್ತಿದ್ದಾಗೆ. ಹೀಗಿರುವಾಗ ನಾವು ಪಾಕ್ ಜತೆ ಕ್ರಿಕೆಟ್ ಆಡುವುದು ಸರಿಯಲ್ಲ. ಇದು ನಮ್ಮ ಭಾವನೆಗಳಿಗೆ ಘಾಸಿ ಉಂಟು ಮಾಡಿದೆ ಎಂದು ಶಿವಸೇನೆ, ಆಮ್ಆದ್ಮಿ ಪಕ್ಷಗಳು ಹೇಳಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲೂ ಭಾರಿ ಬೆಂಬಲ ವ್ಯಕ್ತವಾಗಿದೆ.
ಪಹಲ್ಗಾಮ್ ದಾಳಿಯಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡ ಸಂತ್ರಸ್ಥರೂ ಕೂಡ ಭಾರತ-ಪಾಕ್ ಪಂದ್ಯಕ್ಕೆ ವಿರೋಧ ವ್ಯಕ್ತವಾಗಿದ್ದು, ಪಹಲ್ಗಾಮ್ನ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಉದ್ಯಮಿ ಶುಭಂದ್ವಿವೇದಿ ಅವರ ಪತ್ನಿ ಈಶಾನ್ಯ ದ್ವಿವೇದಿ ಅವರು ಭಾರತ-ಪಾಕ್ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿ ಸಂತ್ರಸ್ಥ ಕುಟುಂಬಗಳ ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಪಂದ್ಯವನ್ನು ಬಹಿಷ್ಕರಿಸಿ ಪಂದ್ಯ ಯಾರೂ ನೋಡಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.
